ಹುಣಸೂರು: ಹುಣಸೂರು ನಗರದಿಂದ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 275ರ ನಗರ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾಮಗಾರಿಗೆ 86 ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದರು.
ಸೋಮವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಗರದ ಹೊರವಲಯದ ಹಾಳಗೆರೆ ಗ್ರಾಮ, ಯಶೋಧರಪುರಗ್ರಾಮ ವ್ಯಾಪ್ತಿಯ ಬ್ಲಾಕ್ ಸ್ಪಾಟ್(ಅಪಘಾತವಲಯ) ಗಳನ್ನು ಪರಿಶೀಲಿಸಿ ಮಾತನಾಡಿದರು. ಹುಣಸೂರು ನಗರವನ್ನು ಹಾದುಹೋಗುವ ಬೈಪಾಸ್ ರಸ್ತೆ(ರಾ.ಹೆ.275)ಯಲ್ಲಿ ಇತ್ತೀಚಿನ ವರ್ಷಗಳಲ್ಲಿ ವಾಹನ ದಟ್ಟಣೆಯೂ ಹೆಚ್ಚಿದೆ ಮತ್ತು ಅಪಘಾತ ಪ್ರಕರಣಗಳು ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ರಸ್ತೆ ಅಭಿವೃದ್ಧಿ ಅವಶ್ಯಕವಾಗಿದ್ದು, ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಈಗಾಗಲೇ 86 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಕ್ರಮವಹಿಸಲಿದೆ. ಯೋಜನೆಯಡಿ ನಗರದ ಅರಸು ಪುತ್ಥಳಿಯಿಂದ ಯಶೋಧರಪುರದವರೆಗೆ ನಾಲ್ಕು ಪಥದ ರಸ್ತೆ ಮತ್ತು ಸರ್ವೀಸ್ ರಸ್ತೆ ಅಭಿವೃದ್ಧಿಯಾಗಲಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಇಂಜಿನಿಯರಿಂಗ್ ವಿಭಾಗದ ಎಇಇ ಸದಾಶಿವಮೂರ್ತಿ ಮಾತನಾಡಿ, ಯೋಜನೆಯ ವಿಸ್ತ್ರತ ವರದಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿ ಅನುದಾನ ಮಂಜೂರಾಗಿದೆ. ಯೋಜನೆಯಡಿ ನಗರದ ಮಧ್ಯಭಾಗದಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿಗೆ ಅಡ್ಡಲಾಗಿ 100 ಮೀಟರ್ ಉದ್ದದ ಎರಡು ಸೇತುವೆ ತಲಾ 10 ಕೋಟಿ ರೂ.ಗಳ ವೆಚ್ಚದಡಿ ನಿರ್ಮಾಣಗೊಳ್ಳಲಿದೆ ಎಂದರು. ನಗರಸಭೆ ಮಾಜಿ ಅಧ್ಯಕ್ಷ ಶಿವಕುಮಾರ್, ಸದಸ್ಯ ಹರೀಶ್, ವಿವೇಕ್, ಸತ್ಯ ಎಂಎಎಸ್ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ಇತರರು ಹಾಜರಿದ್ದರು.