ಹುಬ್ಬಳ್ಳಿ: ಲಾಕ್ಡೌನ್ನಿಂದ ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದಿದ್ದ ವ್ಯಕ್ತಿಯೊಬ್ಬ ಸಾವಿಗೀಡಾಗಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಭಾನುವಾರ ನಡೆದಿದೆ.
ಬಸವರಾಜ ವೆಂಕಪ್ಪ ಕುರುವಿನಕೊಪ್ಪ (45 ವರ್ಷ) ಮೃತ ವ್ಯಕ್ತಿ. ಕಲಘಟಗಿ ತಾಲ್ಲೂಕಿನ ಗಂಬ್ಯಾಪುರ ನಿವಾಸಿಯಾಗಿದ್ದ ಬಸವರಾಜ ಮದ್ಯದ ದಾಸನಾಗಿದ್ದ. ಮಹಾಮಾರಿ ಕರೊನಾ ವೈರಸ್ ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್ಡೌನ್ ಹೇರಿರುವುದರಿಂದ ಎಲ್ಲಿಯೂ ಮದ್ಯ ಸಿಗದೆ ಪರದಾಡಿದ್ದ ಆತ ಸ್ಯಾನಿಟೈಸರ್ ಕುಡಿದಿದ್ದ.
ಮೂರು ದಿನಗಳ ಹಿಂದೆಯೇ ಸ್ಯಾನಿಟೈಸರ್ ಕುಡಿದು ಅಸ್ವಸ್ಥಗೊಂಡಿದ್ದ ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವಿಗೀಡಾಗಿದ್ದಾರೆ. ಅಲ್ಲದೆ, ಹುಬ್ಬಳ್ಳಿಯಲ್ಲಿ ಹಲವರು ಮದ್ಯ ಸಿಗದ ಕಾರಣ ಸ್ಯಾನಿಟೈಸರ್ ಮೊರೆ ಹೋಗಿದ್ದಾರೆಂಬ ವಿಷಯವು ಬಹಿರಂಗವಾಗಿದೆ.