More

    ಸಮೀಸ್​ನಲ್ಲಿ ಬಲಿಷ್ಠ ಭಾರತ ಸೋಲಿಸಲು ಇರುವುದೊಂದೆ ಆಯ್ಕೆ… ಇದು ಗಿಲ್​ಕ್ರಿಸ್ಟ್​ ತಂತ್ರಗಾರಿಕೆ!

    ನವದೆಹಲಿ: ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಇದುವರೆಗೂ ಆಡಿದ ಎಂಟು ಪಂದ್ಯಗಳಲ್ಲಿಯೂ ಅಮೋಘ ಗೆಲುವು ಸಾಧಿಸಿ, ಅಜೇಯ ಓಟದೊಂದಿಗೆ ಸೆಮಿಫೈನಲ್​ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ರೋಹಿತ್​ ಶರ್ಮ ನೇತೃತ್ವದ ಭಾರತ ತಂಡ ಪಾತ್ರವಾಗಿದೆ. ವಿಶ್ವಕಪ್​ ಟ್ರೋಫಿಯನ್ನು ಎತ್ತಿಹಿಡಿಯಲು ಟೀಮ್​ ಇಂಡಿಯಾಗೆ ಇನ್ನೊಂದೇ ಹೆಜ್ಜೆ ಬಾಕಿ ಇದೆ. ಇಡೀ ಟೂರ್ನಿಯಲ್ಲಿ ಭಾರತವೇ ಬಲಿಷ್ಠ ತಂಡ ಎಂಬ ಅಭಿಪ್ರಾಯವಿದ್ದು, ಈ ಬಾರಿ ಟ್ರೋಫಿ ಎತ್ತಿಹಿಡಿಯುವ ನೆಚ್ಚಿನ ತಂಡವಾಗಿದೆ.

    ಭಾರತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ರೋಹಿತ್​ ಪಡೆಯ ಅಶ್ವಮೇಧ ಓಟವನ್ನು ಈವರೆಗೂ ಯಾರೊಬ್ಬರು ಕಟ್ಟಿಹಾಕಿಲ್ಲ. ನಾನಾ ತಂತ್ರಗಳನ್ನು ಎಣೆದರೂ ಕೂಡ ಭಾರತ ಬ್ಯಾಟಿಂಗ್​ ಮತ್ತು ಬೌಲಿಂಗ್​ ಸಾಮರ್ಥ್ಯದ ಮುಂದೆ ಯಾವುದೂ ಫಲಿಸುತ್ತಿಲ್ಲ. ಇದೀಗ ಸೆಮಿಫೈನಲ್​ನಲ್ಲಿ ಭಾರತವನ್ನು ಕಟ್ಟಿಹಾಕಲು ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಆ್ಯಡಂ ಗಿಲ್​ಕ್ರಿಸ್ಟ್ ಕೆಲವೊಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.

    ಫಾಕ್ಸ್​ ಕ್ರಿಕೆಟ್​ ಮಾಧ್ಯಮದೊಂದಿಗೆ ಮಾತನಾಡುವಾಗ ಸಮಿಫೈನಲ್​ನಲ್ಲಿ ಭಾರತವನ್ನು ಸಮರ್ಥವಾಗಿ ಎದುರಿಸಲು ಇರುವ ತಂತ್ರವನ್ನು ಗಿಲ್​ಕ್ರಿಸ್ಟ್​ ವಿವರಿಸಿದ್ದಾರೆ. ಮೊದಲನೆಯದಾಗಿ ಭಾರತದ ವಿರುದ್ಧ ಯಾರೂ ಸಮಿಫೈನಲ್​ನಲ್ಲಿ ಕಾದಾಡುತ್ತಾರೋ ಆ ತಂಡ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಳ್ಳಬೇಕು. ಚೇಸಿಂಗ್​ ಮಾಸ್ಟರ್​ ವಿರಾಟ್​ ಕೊಹ್ಲಿಯಂತಹ ಶ್ರೇಷ್ಠ ಆಟಗಾರನೊಂದಿಗೆ ಚೇಸಿಂಗ್‌ನಲ್ಲಿ ಭಾರತ ತಂಡ ಪ್ರಾವೀಣ್ಯತೆಯನ್ನು ಹೊಂದಿರುವುದು ಎಲ್ಲರಿಗೂ ತಿಳಿದೇ ಇದೆ. ಇದನ್ನು ಸ್ವತಃ ಗಿಲ್​ಕ್ರಿಸ್ಟ್​ ಸಹ ಒಪ್ಪಿಕೊಂಡಿದ್ದಾರೆ. ಆದರೆ, ಗಿಲ್‌ಕ್ರಿಸ್ಟ್ ಪ್ರಕಾರ ಮೊದಲ ಬ್ಯಾಟಿಂಗ್​ ಆಯ್ದುಕೊಂಡು ಭಾರತಕ್ಕೆ ಬೃಹತ್ ಮೊತ್ತದ ಗುರಿಯನ್ನು ನೀಡುವುದರ ಹಿಂದಿನ ಕಾರ್ಯತಂತ್ರದ ಪ್ರಯೋಜನವನ್ನು ಗಿಲ್​ ಕ್ರಿಸ್ಟ್​ ವಿವರಿಸಿದರು.

    ಭಾರತದ ಬೌಲಿಂಗ್​ ಸಾಮರ್ಥ್ಯದ ಬಗ್ಗೆ ಮಾತನಾಡಿರುವ ಗಿಲ್​ಕ್ರಿಸ್ಟ್, ವಿಶೇಷವಾಗಿ ರಾತ್ರಿ ಸಮಯದಲ್ಲಿ ಬೌಲರ್​ಗಳ ಬೌಲಿಂಗ್​ ದಾಳಿಯ ಪರಿಣಾಮಕತ್ವವನ್ನು ಒತ್ತಿ ಹೇಳಿದರು. ಮೊಹಮ್ಮದ್​ ಸಿರಾಜ್​, ಮೊಹಮ್ಮದ್​ ಶಮಿ ಮತ್ತು ಜಸ್ಪ್ರಿತ್​ ಬೂಮ್ರಾರಂತಹ ತ್ರಿಮೂರ್ತಿ ಬೌಲರ್​ಗಳನ್ನು ಗಿಲ್​ ಮೆಚ್ಚಿಕೊಂಡರು. ಅಲ್ಲದೆ, ರಾತ್ರಿಗಿಂತ ಹಗಲಿನ ಪರಿಸ್ಥಿತಿಯಲ್ಲಿ ಈ ಅಸಾಧಾರಣ ಬೌಲರ್​ಗಳನ್ನು ಎದುರಿಸುವುದು ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಉತ್ತಮ ಅವಕಾಶವನ್ನು ನೀಡುತ್ತದೆ ಎಂದು ಗಿಲ್​ಕ್ರಿಸ್ಟ್​​ ಹೇಳಿದ್ದಾರೆ.

    ರಾತ್ರಿಯ ಸಮಯದಲ್ಲಿ ಭಾರತೀಯ ಬೌಲರ್​ಗಳ ಎಸೆತ ತುಂಬಾ ಮಾರಕವಾಗಿರುತ್ತದೆ. ಈ ವೇಳೆ ಅವರ ಎಸೆತಗಳನ್ನು ಎದುರಿಸುವು ಬಹುತೇಕ ಕಷ್ಟ. ಹೀಗಾಗಿ ಹಗಲಿನ ವೇಳೆ ಅವರನ್ನು ಎದುರಿಸುವುದು ಬ್ಯಾಟ್ಸ್​ಮನ್​ಗಳಿಗೆ ಅನುಕೂಲಕರವಾಗಿರುತ್ತದೆ ಎಂದರು.

    ಇದೇ ಸಂದರ್ಭದಲ್ಲಿ ಭಾರತ ತಂಡದ ಬ್ಯಾಟಿಂಗ್​ ಮತ್ತು ಬೌಲಿಂಗ್​ ಸಮತೋಲನವನ್ನು ಗಿಲ್​ ಕೊಂಡಾಡಿದರು. ಪ್ರತಿಭಾವಂತ ವೇಗಿಗಳ ಜತೆಗೆ ಸ್ಪಿನ್​ನಲ್ಲಿನ ವೈವಿಧ್ಯತೆ ಭಾರತಕ್ಕೆ ಪ್ಲಸ್​ ಆಗಿದೆ. ರವೀಂದ್ರ ಜಡೇಜಾ ಮತ್ತು ಕುಲದೀಪ್​ ಯಾದವ್​ ಸ್ಪಿನ್​ ಯಾವುದೇ ಎದುರಾಳಿಗಳನ್ನು ವಿಚಲಿತಗೊಳಿಸುತ್ತದೆ. ಆರಂಭಿಕ, ಮಧ್ಯಮ ಮತ್ತು ಅಂತಿಮ ಕ್ರಮಾಂಕದಲ್ಲಿ ಭಾರತದ ಬ್ಯಾಟಿಂಗ್​ ಲೈನಪ್​ ಅದ್ವಿತೀಯವಾಗಿದೆ. ಅಲ್ಲದೆ, ಎಲ್ಲರೂ ಉತ್ತಮ ಫಾರ್ಮ್​ನಲ್ಲಿರುವುದು ಭಾರತದ ಟ್ರೋಫಿ ಎತ್ತಿಹಿಡಿಯುವ ಕನಸಿಗೆ ಪೂರಕವಾಗಿದೆ ಎಂದು ಗಿಲ್​ಕ್ರಿಸ್ಟ್​​ ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್​)

    ಈ ವಿಶ್ವಕಪ್​ನಲ್ಲಿ ಬ್ಯಾಟರ್​ಗಳಿಗೆ ಶಮಿಯೇ ಬೆದರಿಕೆ! ಕಾರಣ ತಿಳಿಸಿದ ಪಾಕ್​ ಮಾಜಿ ವೇಗಿ ವಾಸಿಂ ಅಕ್ರಮ್​

    ಲಂಕಾ ವಿರುದ್ಧ ಕಿವೀಸ್​ ಗೆದ್ದರೂ ಪಾಕಿಸ್ತಾನಕ್ಕಿದೆ ಭಾರತದ ವಿರುದ್ಧ ಸೆಮೀಸ್​ನಲ್ಲಿ ಕಾದಾಡುವ ಅವಕಾಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts