ಗಂಗೊಳ್ಳಿ: ಗೋವನ್ನು ಗೋ ಮಾತೆಯೆಂದು ಪೂಜಿಸುವ ಕುಂದಾಪುರ ತಾಲೂಕಿನ ಹರ್ಕೂರಿನ ಕುಟುಂಬವೊಂದು ದೇವಾಲಯ ಮಾದರಿಯಲ್ಲಿ ಗೋವುಗಳಿಗೆ ಮನೆ ಕಟ್ಟಿಸಿ ಅದಕ್ಕೆ ಪುಣ್ಯಕೋಟಿ ಎಂದು ಹೆಸರಿಟ್ಟು ಗೃಹಪ್ರವೇಶ ಮಾಡಿಸಿದೆ.
ಸಿವಿಲ್ ಕಂಟ್ರಾೃಕ್ಟರ್, ಸಾವಯವ ಕೃಷಿಕ ಹರ್ಕೂರಿನ ಜಯರಾಮ ಶೆಟ್ಟಿ -ಶ್ಯಾಮಲಾ ಶೆಟ್ಟಿ ದಂಪತಿ ಇದರ ನಿರ್ಮಾತೃಗಳು. ಗೃಹಪ್ರವೇಶದ ರೀತಿಯಲ್ಲೇ ಪೂಜಾಕ್ರಮಗಳನ್ನು ಮಾಡಿ, ಮೆರವಣಿಗೆ ಮೂಲಕ ದನಗಳನ್ನು ಪುಣ್ಯಕೋಟಿ ಮನೆಗೆ ಕರೆತರಲಾಯಿತು. ನಂತರ ಬಂದ ಅತಿಥಿಗಳೆಲ್ಲರೂ ಗೋ ಮಾತೆಗೆ ಆರತಿ ಬೆಳಗಿ ಭೋಜನ ಸ್ವೀಕರಿಸಿದರು.
15*12 ಅಡಿಯ ಈ ಕಟ್ಟಡದ ಮೇಲೆ ಕಲಶ ಅಳವಡಿಸಿ, ಮುಂಭಾಗ ಜಗಲಿ ನಿರ್ಮಿಸಲಾಗಿದೆ. ಸದ್ಯ ಐದು ದೇಸಿ ದನಗಳಿದ್ದು, ಹಾಲನ್ನು ಮನೆಯ ಅವಶ್ಯಕತೆಗೆ ಉಪಯೋಗಿಸಿ, ಉಳಿದದ್ದರಲ್ಲಿ ತುಪ್ಪ, ಬೆಣ್ಣೆ ತಯಾರಿಸುತ್ತಾರೆ.