ಪಿ.ಎನ್. ಹೇಮಗಿರಿಮಠ ಗುತ್ತಲ
ಪೊಲೀಸ್ ಠಾಣೆಗೆ ಆಗಮಿಸುವ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಸ್ಟೀಮ್ (ಬಿಸಿ ಹವೆ) ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಇದರೊಟ್ಟಿಗೆ ಕಷಾಯ ನೀಡುವ ಮೂಲಕ ಗುತ್ತಲ ಪೊಲೀಸ್ ಠಾಣೆ ಜನಸ್ನೇಹಿ ಎನಿಸಿಕೊಂಡಿದೆ.
ಕರೊನಾ ಸೋಂಕು ಹರಡದಂತೆ ಏನೆಲ್ಲ ಕ್ರಮ ಕೈಗೊಳ್ಳಬೇಕು. ಕಷಾಯ ಹಾಗೂ ಬಿಸಿ ಹವೆಯನ್ನು (ಸ್ಟೀಮ್ ತೆಗೆದುಕೊಂಡರೆ ಆಗುವ ಲಾಭಗಳೇನು ಎನ್ನುವುದನ್ನೂ ವಿವರವಾಗಿ ತಿಳಿಸಲಾಗುತ್ತಿದೆ.
ಕಡಿಮೆ ವೆಚ್ಚದಲ್ಲಿ ಪೈಪ್ಗಳನ್ನು ಬಳಸಿ, ಶವರ್ ಬಾತ್ನಲ್ಲಿ ಉಪಯೋಗಿಸುವ ಶವರ್ ಹೆಡ್, ನಳ (ನಲ್ಲಿ), ಕುಕ್ಕರ್, ಸಣ್ಣದೊಂದು ಸಿಲಿಂಡರ್ ಉಪಯೋಗಿಸಿ ಬಿಸಿ ಹವೆಯನ್ನು ಆಸ್ವಾದಿಸುವ ಮೂಲಕ ಕರೊನಾ ಸೋಂಕು ದೇಹಕ್ಕೆ ಪ್ರವೇಶಿಸದಂತೆ ಮಾಡಲಾಗುತ್ತಿದೆ.
ಕುಕ್ಕರ್ನಲ್ಲಿ ನೀರು, ಶುಂಠಿ, ಬೆಳ್ಳುಳ್ಳಿಯನ್ನು ಹಾಕಿ ಕುದಿಸಲಾಗುತ್ತದೆ. ನಂತರ ಅದು ಕೆಲ ಸಮಯದ ನಂತರ ಕುಕ್ಕರ್ ಮೇಲ್ಭಾಗದಲ್ಲಿ ಹವೆಯಾಗಿ ಪೈಪ್ಗಳ ಮೂಲಕ ಶವರ್ ಹೆಡ್ನಿಂದ ನಿಧಾನವಾಗಿ ಹವೆ ಹೊರಸೂಸುತ್ತದೆ. ಇದನ್ನು ಮೂಗಿನ ಮೂಲಕ ತೆಗೆದುಕೊಳ್ಳುವುದರಿಂದ ಕರೊನಾ ವೈರಾಣು ನಾಶವಾಗುತ್ತದೆ ಎನ್ನುತ್ತಾರೆ ಪೊಲೀಸರು. ಈ ಪ್ರಯೋಗವನ್ನು ಸೈನಿಕರೊಬ್ಬರು ಮಾಡಿದ್ದು, ಅವರಿಂದ ಪ್ರೇರಣೆಗೊಂಡು ಇಂತಹ ವಿಧಾನ ಮಾಡಲಾಗಿದೆ ಎನ್ನುತ್ತಾರೆ ಪಿಎಸ್ಐ ಸಿದ್ಧಾರೂಢ ಬಡಿಗೇರ. ಅಲ್ಲದೆ, ಆಯುಷ್ ಇಲಾಖೆಯ ಮಾರ್ಗದರ್ಶನದಲ್ಲಿ ಶುಂಠಿ, ದಾಲ್ಚಿನ್ನಿ, ಬೆಳ್ಳುಳ್ಳಿ, ಚಕ್ಕೆ, ಕೊತ್ತಂಬರಿ ಕಾಳು, ಅರಿಷಿಣದ ಬೇರು, ಕರಿಮೆಣಸು, ಲಿಂಬೆ ರಸ, ಪುದಿನಾ, ಬೆಲ್ಲ, ಮೆಂತೆ ಕಾಳು ಹಾಗೂ ಜೀರಗಿ ಉಪಯೋಗಿಸಿಕೊಂಡು ಕಷಾಯ ತಯಾರಿಸಿ ನಿತ್ಯವೂ ಠಾಣೆಯ ಎಲ್ಲ ಸಿಬ್ಬಂದಿಗೆ ಹಾಗೂ ಆಗಮಿಸುವ ಸಾರ್ವಜನಿಕರಿಗೆ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಸಮಾಜ ಮುಖಿಯಾಗಿ ಸಿಬ್ಬಂದಿಯೊಂದಿಗೆ ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವ ಗುತ್ತಲ ಪೊಲೀಸ್ ಠಾಣೆ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ ಮೊದಲು ಆರಂಭಿಸಿದ್ದೆವು. ನಂತರ ನಮ್ಮ ಸಿಬ್ಬಂದಿ ಅಭಿಪ್ರಾಯದಂತೆ ಜನರಿಗೂ ಇದನ್ನು ಕೊಡಲಾರಂಭಿಸಿದೆವು. ಕರೊನಾ ಸೋಂಕು ಎಲ್ಲೆಡೆ ಹರಡದಂತೆ ಅಗತ್ಯ ಕ್ರಮ ಕೈಗೊಂಡಿದ್ದೇವೆ.
| ಸಿದ್ಧಾರೂಢ ಬಡಿಗೇರ, ಪಿಎಸ್ಐ, ಗುತ್ತಲ
ನನ್ನ ಚಿಕ್ಕಪ್ಪನ ಸೈಕಲ್ ಕಳವಾಗಿದ್ದರ ಬಗ್ಗೆ ದೂರು ನೀಡಲು ಠಾಣೆಗೆ ತೆರಳಿದ್ದ ವೇಳೆ ಸ್ಟೀಮ್ ಪಡೆದುಕೊಂಡೆ. ಬಹಳ ಹಿತ ಎನಿಸಿತು. ಇದನ್ನು ಪಡೆದುಕೊಂಡಾಗ ಉಸಿರಾಟ ಉತ್ತಮ ಎನಿಸಿತು. ಅಲ್ಲದೆ, ಕಷಾಯ ನೀಡಿದರು. ಕಷಾಯ ಕುಡಿದ ನಂತರ ಗಂಟಲಿನಲ್ಲಿ ಹಿತವೆನಿಸಿತು. ಇದು ಗುತ್ತಲ ಠಾಣೆಯ ಉತ್ತಮ ಹಾಗೂ ಮಾದರಿ ಕಾರ್ಯ.
| ಶೇಖರ ನಾಯಕ, ಶಿಕ್ಷಕ, ಶಿವನಗರ-ಗುತ್ತಲ