ಭೋಪಾಲ್: ಒಬ್ಬ ರೋಗಿ ಮೃತಪಟ್ಟರೂ ಗಮನಿಸದ ಈ ಸರ್ಕಾರಿ ಆಸ್ಪತ್ರೆ ವಿರುದ್ಧ ಅಪಾರ ಟೀಕೆ ವ್ಯಕ್ತವಾಗಿದೆ.
ಮಧ್ಯಪ್ರದೇಶದ ಮೊರೆನಾ ಜಿಲ್ಲಾಸ್ಪತ್ರೆಯಲ್ಲಿ ಘಟನೆ ನಡೆದಿದೆ. 35 ವರ್ಷದ ಅಂಗವಿಕಲ ದೇವೇಂದ್ರ ವರ್ಮಾ ಎಂಬುವರು ಬೆಡ್ ಮೇಲೆ ಮಲಗಿದ್ದಂತೆಯೇ ಬುಧವಾರ ಸಂಜೆಯೇ ಮೃತಪಟ್ಟಿದ್ದರೂ, ಆಸ್ಪತ್ರೆ ಸಿಬ್ಬಂದಿ ಅದನ್ನು ಗಮನಿಸಲಿಲ್ಲ.
ಮರುದಿನ ಶವ ವಾಸನೆ ಬರಲು ಪ್ರಾರಂಭಿಸಿದ ನಂತರ, ಅದೇ ವಾರ್ಡ್ನಲ್ಲಿದ್ದ ಇತರ ರೋಗಿಗಳು ನರ್ಸ್ಗಳ ಬಳಿ ಹೇಳಿದರು. ಆಗಲಷ್ಟೇ ಮೃತನನ್ನು ಗಮನಿಸಿದ್ದಾರೆ ಎನ್ನಲಾಗಿದೆ.
ದೇವೇಂದ್ರ ವರ್ಮಾ ಉತ್ತರ ಪ್ರದೇಶದ ಫಿರೋಜಾಬಾದ್ನ ನಿವಾಸಿ. ಜು.21ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಬೆನ್ನಿನ ಮೇಲೊಂದು ಗಾಯವಾಗಿ, ಅದಕ್ಕೆ ಇರುವೆ ಮುತ್ತಿಕೊಂಡಿತ್ತು. ಆ ಗಾಯವನ್ನು ಕಚ್ಚಿತ್ತು ಎಂಬುದು ಕೂಡ ಮೃತಪಟ್ಟ ಬಳಿಕವಷ್ಟೇ ಗೊತ್ತಾಗಿದೆ.
ಬುಧವಾರ ಸಂಜೆ ಸತ್ತಿದ್ದರೂ ಗುರುವಾರದವರೆಗೆ ಶವವನ್ನು ಹಾಗೇ ಬಿಡಲಾಗಿತ್ತು. ಅಷ್ಟಕ್ಕೂ ಆಸ್ಪತ್ರೆ ಸಿಬ್ಬಂದಿಗೆ ಅದು ಗೊತ್ತೇ ಆಗಲಿಲ್ಲ. ಅದಾದ ನಂತರ ಗುರುವಾರ ಬೆಳಗ್ಗೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಅಶೋಕ್ ಗುಪ್ತಾ ಅವರು ಘಟನೆಯನ್ನು ಒಪ್ಪಿಕೊಂಡಿದ್ದಾರೆ. ವರ್ಮಾ ಸತ್ತಿದ್ದು ನಮ್ಮ ಸಿಬ್ಬಂದಿಗೆ ಗೊತ್ತಾಗಲಿಲ್ಲ ಎಂದಿದ್ದಾರೆ. ಹಾಗೇ, ವಾರ್ಡ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ನರ್ಸ್ಗಳು, ನಾವು ಬುಧವಾರವೇ ವೈದ್ಯರಿಗೆ ತಿಳಿಸಿದ್ದೆವು. ದೇವೇಂದ್ರ ವರ್ಮಾ ಆರೋಗ್ಯ ಹದಗೆಡುತ್ತಿದೆ. ಹಾಗಾಗಿ ಗ್ವಾಲಿಯರ್ಗೆ ಶಿಫ್ಟ್ ಮಾಡುವುದು ಒಳಿತು ಎಂದು ನಾವು ಹೇಳಿದ್ದೆವು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಏರ್ ಏಷ್ಯಾ ವಿಮಾನ ತುರ್ತು ಭೂಸ್ಪರ್ಶ; ಅಪಾಯದಿಂದ ಪಾರಾದ ಪ್ರಯಾಣಿಕರು
ಈ ವ್ಯಕ್ತಿಯನ್ನು ಯಾರೋ ಅಪರಿಚಿತರು ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈತನ ಸಂಬಂಧಿಕರ ಬಗ್ಗೆ ನಮಗೆ ತಿಳಿದಿರಲಿಲ್ಲ. ಹಾಗಾಗಿ ಪೊಲೀಸರಿಗೂ ಮಾಹಿತಿ ನೀಡಿದ್ದೆವು. ಆದರೆ ಇದುವರೆಗೂ ಇವರ ಸಂಬಂಧಿಗಳು ಇಲ್ಲಿಗೆ ಬಂದಿರಲಿಲ್ಲ. ಇದೀಗ ವರ್ಮಾ ಮೃತಪಟ್ಟ ಸುದ್ದಿ ತಿಳಿದ ಬಳಿಕ ಆತನ ಸಹೋದರಿಯೋರ್ವರು ಆಗಮಿಸಿದ್ದಾರೆ ಎಂದು ವೈದ್ಯ ಮಾಹಿತಿ ನೀಡಿದ್ದಾರೆ.
ವರ್ಮಾ ಅವರು ಉಪಾಹಾರ ಗೃಹವೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)
ಪೊಲೀಸ್ ವಸತಿ ಗೃಹದ ನೀರಿನ ಸಂಪಿಗೆ ಬಿದ್ದು ಕಾನ್ಸ್ಟೇಬಲ್ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?