ಲಖನೌ: ಉತ್ತರ ಪ್ರದೇಶದ ಮೊರಾದಾಬಾದ್ನ ಸರ್ಕಾರಿ ಆಸ್ಪತ್ರೆಯ ವಾರ್ಡ್ ಬಾಯ್ ಕರೊನಾ ಲಸಿಕೆ ಪಡೆದು 24 ಗಂಟೆಗಳ ನಂತರ ಸಾವನ್ನಪ್ಪಿದ್ದಾನೆ. ಸಾವಿಗೆ ಕಾರಣ ಲಸಿಕೆಯಲ್ಲ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರಾದರೂ, ಲಸಿಕೆ ಪಡೆದ ನಂತರವೇ ಆತ ಹೆಚ್ಚು ಅಸ್ವಸ್ಥನಾಗಿದ್ದಾಗಿ ಕುಟುಂಬ ದೂರಿದೆ.
ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆ, ಬೆನ್ನಿಗೆ ಕಲ್ಲು ಕಟ್ಟಿ ಬಾವಿಗೆ ಎಸೆದ ದುಷ್ಕರ್ಮಿಗಳು!
46 ವರ್ಷದ ಮಹಿಪಾಲ್ ಸಿಂಗ್ ಮೃತ ದುರ್ದೈವಿ. ಈತ ಶನಿವಾರ ಮಧ್ಯಾಹ್ನದ ವೇಳೆ ಆಸ್ಪತ್ರೆಯಲ್ಲಿ ಕರೊನಾ ಲಸಿಕೆ ಪಡೆದಿದ್ದ. ಭಾನುವಾರ ಸಂಜೆ ಮೃತನಾಗಿದ್ದಾನೆ. ಸಾಯುವ ಮುನ್ನ ಎದೆ ನೋವು ಎಂದು ಹೇಳಿದ್ದು, ಉಸಿರಾಡಲು ತೊಂದರೆಯಾಗಿತ್ತೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಆತ ಲಸಿಕೆ ಪಡೆಯುವುದಕ್ಕೂ ಮುನ್ನವೇ ಅನಾರೋಗ್ಯದಿಂದ ಬಳಲುತ್ತಿದ್ದುದ್ದಾಗಿ ತಿಳಿಸಲಾಗಿದೆ.
ನನ್ನ ತಂದೆ ಶನಿವಾರ ಮಧ್ಯಾಹ್ನ 1.30ರ ಸಮಯಕ್ಕೆ ಲಸಿಕೆ ಪಡೆದರು. ಅದಾದ ನಂತರ ನಾನೇ ಅವರನ್ನು ಮನೆಗೆ ಕರೆತಂದೆ. ಅವರಿಗೆ ಮೊದಲಿನಿಂದಲೂ ಹುಷಾರಿರಲಿಲ್ಲವಾದರೂ ಲಸಿಕೆ ಪಡೆದ ಮೇಲೆ ಹೆಚ್ಚು ಕೆಮ್ಮುತ್ತಿದ್ದರು, ಉಸಿರಾಡುವುದಕ್ಕೆ ತೊಂದರೆಯಾಗುತ್ತಿರುವುದಾಗಿ ಹೇಳುತ್ತಿದ್ದರು ಎಂದು ಮೃತನ ಮಗ ತಿಳಿಸಿದ್ದಾರೆ.
ಇದನ್ನೂ ಓದಿ: ಕೈ ಕೊಟ್ಟ ನಾಯಕನ ವಿರುದ್ಧವೇ ಸ್ಪರ್ಧೆಗೆ ನಿಲ್ಲುತ್ತಾರಂತೆ ದೀದಿ! ಬಿಜೆಪಿ 51 ಸೀಟು ಗೆಲ್ಲುತ್ತೆ ಎಂದು ಭವಿಷ್ಯ
ಮೃತನಾದ ವ್ಯಕ್ತಿ ಮೊದಲೇ ಅಸ್ವಸ್ಥನಾಗಿದ್ದ. ಆತನ ಸಾವಿಗೆ ಲಸಿಕೆಯೇ ಕಾರಣ ಎಂದು ಹೇಳಲಾಗುವುದಿಲ್ಲ. ಲಸಿಕೆ ಪಡೆದ ನಂತರ ಆತ ಚೆನ್ನಾಗಿಯೇ ಇದ್ದ. ಶನಿವಾರ ರಾತ್ರಿ ಶಿಫ್ಟ್ನಲ್ಲಿ ಕೆಲಸ ಮಾಡಿದ್ದಾನೆ ಕೂಡ ಎಂದು ಮೊರಾದಾಬಾದ್ನ ಮುಖ್ಯ ವೈದ್ಯಕೀಯ ಅಧಿಕಾರಿ ಎಂ.ಸಿ.ಗಾರ್ಗ್ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆತ ಹೃದಯಾಘಾತದಿಂದಾಗಿ ಸಾವನ್ನಪ್ಪಿರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್)
ಪಂಚರ್ ಟೈಯರ್ನಲ್ಲೇ ಪತ್ನಿ ಮನೆಗೆ ಪ್ರಯಾಣ ಬೆಳೆಸಿದ ಯುವಕನಿಗೆ ಕಾದಿತ್ತು ಶಾಕ್! ಅಪಘಾತವಂತೂ ಅಲ್ಲ