ಹೊಸಪೇಟೆ: ಬಸವ ಜಯಂತಿ ಹಾಗೂ ರಂಜಾನ್ ನಿಮಿತ್ತ ನಗರದ ಮೇನ್ ಬಜಾರ್ನಲ್ಲಿ ಶುಕ್ರವಾರ ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದರು.
ಪರಸ್ಪರ ಅಂತರ ಮರೆತು ತರಕಾರಿ, ದಿನಸಿ, ಶಾವಿಗೆ ಖರೀದಿಸುವಲ್ಲಿ ನಿರತರಾಗಿದ್ದರು. ಕಳೆದ ಬಾರಿಯಂತೆ ಲಾಕ್ಡೌನ್ ಸಮಯದಲ್ಲಿ ಬಸವಜಯಂತಿ, ರಂಜಾನ್ ಬಂದಿದ್ದರಿಂದ ಆಚರಣೆಗೆ ನಿಷೇಧ ಹೇರಿದ ಪರಿಣಾಮ ಸಂಭ್ರಮ ಕಂಡುಬರಲಿಲ್ಲ.
ನಗರ ಈದ್ಗಾ ಮೈದಾನ ಸೇರಿ ಬೇರೆ ಬೇರೆ ಪ್ರದೇಶಗಳಲ್ಲಿರುವ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ, ಪರಸ್ಪರ ಶುಭಾಶಯಕ್ಕೆ ಬ್ರೇಕ್ ಹಾಕಲಾಗಿದ್ದು, ಮುಸ್ಲಿಮರು ವಾಟ್ಸಾೃಪ್, ದೂರವಾಣಿ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಬಾರದ ಸಣ್ಣ, ಪುಟ್ಟ ಅಂಗಡಿಗಳ ಮಾಲೀಕರಿಗೆ ಪೊಲೀಸರು ಎಚ್ಚರಿಕೆ ನೀಡಿ ಮುಚ್ಚಿಸಿದರು.
ನಿರ್ಗತಿಕರಿಗೆ ಉಚಿತ ಊಟ: ಲಾಕ್ಡೌನ್ನಿಂದ ಕಂಗಾಲಾದ ನಿರ್ಗತಿಕರಿಗೆ ನಗರದ ಸಮಾನ ಮನಸ್ಕರ ಯುವಕರ ತಂಡ ಮೂರು ದಿನಗಳಿಂದ ಊಟದ ಪ್ಯಾಕೇಟ್ಗಳನ್ನು ವಿತರಣೆ ಮಾಡುತ್ತಿದೆ. ಶುಕ್ರವಾರ ನಗರದ ದೀಪಯಾನ ಶಾಲೆ ಆವರಣ, ರಸ್ತೆ ಪಕ್ಕದಲ್ಲಿ ಇದ್ದ ನಿರ್ಗತಿಕರಿಗೆ ಆಹಾರದ ಪೊಟ್ಟಣ ವಿತರಿಸಿದರು. ತಂಡದ ಸದಸ್ಯರಾದ ಅನೂಪ್ ಶಿವಾನಂದ, ಗುಂಡಿ ರಾಘವೇಂದ್ರ, ನಾಗೇಶ್ ತಳವಾರ, ವೀರೇಶ್ವರ, ನೀಲಕಂಠ ಇದ್ದರು.