ಹೊಸಪೇಟೆ: ಭಾರಿ ಹಿಮಪಾತದಿಂದಾಗಿ ಕಾಶ್ಮೀರದ ಸೋನಾಮಾರ್ಗದ ಗ್ಲೇಸಿಯರ್ ಹೋಟೆಲ್ನಲ್ಲಿ ಸಿಲುಕಿದ್ದ ನಗರ ಹಾಗೂ ಹುಬ್ಬಳ್ಳಿ ಮೂಲದ ಪ್ರವಾಸಿಗರನ್ನು ವಿಶೇಷ ಮಿಲಿಟರಿ ಪಡೆ ಹಾಗೂ ಸ್ಥಳೀಯಾಡಳಿತ ರಕ್ಷಣೆ ಮಾಡಿದೆ.
ನಗರದ ನಗರದ ಪ್ರಕಾಶ್ ಮತ್ತು ಸುಧಾ ಮೆಹರವಾಡೆ ದಂಪತಿ ಸೇರಿದಂತೆ ಹುಬ್ಬಳ್ಳಿಯ ವೆಂಕಟೇಶ್ ದಲಬಂಜನ, ಪ್ರೀತಿ ದಲಬಂಜನ, ಆನಂದ ಬಸವ, ವಂದನಾ ಬಸವ, ಮಂಜು ಬದ್ದಿ, ಗೀತಾ ಬದ್ದಿ, ಗೋಪಾಲ ಕಲಬುರಗಿ, ವೀಣಾ ಕಲಬುರಗಿ ಎಂಬುವರು ಸಿಲುಕಿದ್ದರು. ಶನಿವಾರ ಬೆಳಗ್ಗೆ 11ಕ್ಕೆ ಅಲ್ಲಿನ ಸ್ಥಳೀಯ ಪೊಲೀಸ್ ಕಮಿಷನರ್ ಹೋಟೆಲ್ಗೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.
ಬಳಿಕ ಸಿಆರ್ಪಿಎಫ್ ಪಡೆ ಹಾಗೂ ಸ್ಥಳೀಯಾಡಳಿತವು ರಸ್ತೆಯಲ್ಲಿನ ಅಪಾರ ಪ್ರಮಾಣದ ಮಂಜುಗಡ್ಡೆಯನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಹೋಟೆಲ್ನಿಂದ ಪ್ರವಾಸಿಗರನ್ನು ರಕ್ಷಿಸಿ, ಆರು ಕಿಮೀ ದೂರದ ಮಿಲಿಟರಿ ಶಿಬಿರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು ಮತ್ತು ಎಲ್ಲರೂ ನಮ್ಮನ್ನು ಆತ್ಮೀಯವಾಗಿ ಕಂಡರು ಎಂದು ವಿಜಯವಾಣಿಗೆ ಪ್ರಕಾಶ್ ಮೆಹರವಾಡೆ ತಿಳಿಸಿದರು.