ಹೊಸಪೇಟೆ: ವೃಂದ ಮತ್ತು ನೇಮಕಾತಿಗೆ ತಿದ್ದುಪಡಿ ಮಾಡುವಾಗ ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಯನ್ನು ಪರಿಗಣಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆ.17 ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಎಸ್.ಬಸವರಾಜ ತಿಳಿಸಿದರು.
ನಗರದ ಶ್ರಮಿಕ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜು.3 ರಂದು ಹೊರಡಿಸಿರುವ ಆದೇಶ ನಿವೃತ್ತಿ ಅಂಚಿನಲ್ಲಿರುವ ಬಿಲ್ ಕಲೆಕ್ಟರ್, ಗುಮಾಸ್ತರಿಗೆ ಮಾರಕವಾಗಿದ್ದು, ಂಪಡೆದು ಕಾರ್ಯದರ್ಶಿ ಗ್ರೇಡ್-2 ಮತ್ತು ಲೆಕ್ಕ ಸಹಾಯಕ ಹುದ್ದೆ ನೇಮಕಾತಿಗೆ ಅವಕಾಶ ಕಲ್ಪಿಸಬೇಕು ಎಂದು ಅಗ್ರಹಿಸಿದರು.
15ನೇ ಹಣಕಾಸು ಯೋಜನೆಯಲ್ಲಿ ಗ್ರಾಪಂ ಸಿಬ್ಬಂದಿಗೆ ನಿಗದಿ ಮಾಡಿರುವ ವೇತನವನ್ನು ಶಾಸನ ಬದ್ಧ ಅನುದಾನದಂತೆ ರಾಜ್ಯ ಮಟ್ಟದಲ್ಲೇ ಕಡಿತಗೊಳಿಸಿ ಸಿಬ್ಬಂದಿ ಖಾತೆಗೆ ವರ್ಗಾವಣೆ ಮಾಡಬೇಕು. ಸರ್ಕಾರ ಈ ಹಿಂದೆ ಘೋಷಣೆ ಮಾಡಿದಂತೆ ವೇತನಕ್ಕಾಗಿ ತಗುಲುವ ಹಣಕಾಸನ್ನು ಒದಗಿಸಬೇಕು. ಕನಿಷ್ಠ ವೇತನ ಪರಿಷ್ಕರಣೆ ಮಾಡಬೇಕು. ಎಲ್ಲ ಸಿಬ್ಬಂದಿಗೆ ಪಿಂಚಣಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಆ.17ರಂದು ಅವಳಿ ಜಿಲ್ಲೆಯಿಂದ ಬಿಲ್ಕಲೆಕ್ಟರ್, ಗುಮಾಸ್ತರು, ವಾಟರ್ಮನ್, ಸ್ವೀಪರ್ ಸೇರಿದಂತೆ 1 ಸಾವಿರ ನೌಕರರು ಬೆಂಗಳೂರಿಗೆ ತೆರಳಲಿದ್ದೇವೆ ಎಂದು ತಿಳಿಸಿದರು.
ಸಂಘದ ಹರಪನಹಳ್ಳಿ ತಾಲೂಕು ಅಧ್ಯಕ್ಷೆ ಎಂ.ಪವಿತ್ರಮ್ಮ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ, ಸಿಐಟಿಯು ಜಿಲ್ಲಾ ಅಧ್ಯಕ್ಷ ಆರ್.ಭಾಸ್ಕರ್ ರೆಡ್ಡಿ, ಹೊಸಪೇಟೆ ತಾಲೂಕು ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಇತರರಿದ್ದರು.