More

    ಉದ್ಯೋಗ ಖಾತ್ರಿ ಸದ್ಬಳಕೆ ಮಾಡಿಕೊಳ್ಳಿ

    ಬಸವಕಲ್ಯಾಣ: ಗ್ರಾಮದಿಂದ ವಲಸೆ ಹೋಗದೆ ಪ್ರತಿಯೊಬ್ಬರೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸದ್ಬಳಕೆ ಮಾಡಿಕೊಂಡು ಸ್ವಾಲಂಬಿ ಜೀವನ ನಡೆಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಪಿ ಹೇಳಿದರು.

    ಗುಂಡೂರ ಗ್ರಾಪಂ ವ್ಯಾಪ್ತಿಯ ಇಲ್ಲಾಳ ಗ್ರಾಮದ ನರೇಗಾ ಕಾಮಗಾರಿ ಸ್ಥಳದಲ್ಲಿ ಮಂಗಳವಾರ ಆಯೋಜಿಸಿದ್ದ ವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನದಲ್ಲಿ ಮಾತನಾಡಿದ ಅವರು, ಬೇಸಿಗೆ ಕಾಲದಲ್ಲಿ ಉದ್ಯೋಗ ಆರಿಸಿ ಕೊಂಡು ಯಾರು ಮಹಾರಾಷ್ಟ್ರ, ಆಂದ್ರ ಪ್ರದೇಶಕ್ಕೆ ವಲಸೆ ಹೋಗಬಾರದು. ಇದ್ದ ಊರಲ್ಲೇ ನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ ೧೦೦ ದಿನ ಉದ್ಯೋಗ ಖಾತ್ರಿ ಇದ್ದು, ಬೇಸಿಗೆ ಮುಗಿಯುವವರೆಗೂ ನಿಮ್ಮ ಕೂಲಿ ಪೂರ್ಣಗೊಳಿಸಬೇಕು ಎಂದು ಹೇಳಿದರು.

    ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಬಡವರ ಪರವಾಗಿ ಇರುವ ಯೋಜನೆ ಇದಾಗಿದೆ. ಆದ್ದರಿಂದ ಮಹಿಳೆಯರು ಮತ್ತು ಪುರುಷರು ಕೆಲಸ ಮಾಡುವುದರ ಜತೆಗೆ, ನಿಮ್ಮ ಮನೆಯ ಪಕ್ಕದ ಜನರಿಗೂ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಿ ಇನ್ನೂ ಹೆಚ್ಚಿನ ಕಾರ್ಮಿಕರು ಇದರ ಲಾಭ ಪಡೆದುಕೊಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

    ತಾಪಂ ಸಹಾಯಕ ನಿರ್ದೇಶಕ ಸಂತೋಷ ಚವ್ಹಾಣ್ ಮಾತನಾಡಿ, ಬೇಸಿಗೆ ಮುಗಿಯುವವರೆಗೆ ನಿರಂತರವಾಗಿ ಕೆಲಸ ಕೊಡಲಾಗುವುದು. ಇದರ ಬಗ್ಗೆ ಯಾವುದೇ ಅನುಮಾನ ಬೇಡ. ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು. ಏನಾದರೂ ಸಮಸ್ಯೆ ಇದ್ದಲ್ಲಿ ನಮ್ಮ ಗಮನಕ್ಕೆ ತಂದರೆ ಬಗೆಹರಿಸಲಾಗುವುದು ಎಂದು ಹೇಳಿದರು.

    ಗ್ರಾಪಂ. ಅಧ್ಯಕ್ಷ ನಿರಂಜನಪ್ಪ ಬಿರಾದಾರ, ಉಪಾಧ್ಯಕ್ಷ ಪಾರ್ವತಿ ರಾಜಕುಮಾರ, ಪಿಡಿಒ ಪ್ರಿಯದರ್ಶಿನಿ, ಕಾರ್ಯದರ್ಶಿ ಮಹಾದೇವ ಬೇಳಮಗಿ, ಐಇಸಿ ಸಂಯೋಜಕ ವೀರಾರೆಡ್ಡಿ, ಟಿಎಗಳಾದ ಮಲ್ಲಕಾರ್ಜುನ ಜಾಧವ್, ಶ್ರೀಕಾಂತ ಪಾಟೀಲ್, ಕಾಯಕ ಮಿತ್ರ ಅಮ್ರಾಪಲ್ಲಿ, ಮೇಟ್ ಮತ್ತು ಕಾರ್ಮಿಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts