ಹೊನ್ನಾಳಿ: ನಗರದ ತುಂಗಭದ್ರಾ ಬಡಾವಣೆಗೆ ಹೊಂದಿಕೊಂಡಿರುವ ತೋಟಗಳಲ್ಲಿ ಸೋಮವಾರ ಚಿರತೆ ಕಾಣಿಸಿಕೊಂಡಿದೆ. ಅಡಕೆ ತೋಟದ ಮಾಲೀಕ ಶಿವಕುಮಾರ ಸೋಮವಾರ ಬೆಳಗ್ಗೆ ತಮ್ಮ ಅಡಕೆ ತೋಟಕ್ಕೆ ಹೋದಾಗ 30 ರಿಂದ 40 ಅಡಿಗಳ ದೂರದಲ್ಲಿ ಚಿರತೆ ಕಂಡಿದೆ.
ಇನ್ನೇನು ಚಿರತೆ ತನ್ನ ಕಡೆಗೆ ನುಗ್ಗುತ್ತದೆ ಎಂದು ತಿಳಿದ ರೈತ ಶಿವಕುಮಾರ್ ಜೋರಾಗಿ ಕೇಕೆ ಹಾಕಿ ಕಿರುಚಿಕೊಂಡಾಗ ಅದು ಅಲ್ಲಿಂದ ಕಾಲ್ಕಿತ್ತಿದೆ.
ದೂರವಾಣಿ ಮೂಲಕ ಮಾಹಿತಿ
ತಕ್ಷಣ ಮತ್ತೊಂದು ಅಡಕೆ ತೋಟದಲ್ಲಿದ್ದ ರೈತ ಚಂದ್ರಕುಮಾರ್ ಅರಣ್ಯ ಇಲಾಖೆಯ ಸಿಬ್ಬಂದಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.
ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಶಿವಯೋಗಿ ತಮ್ಮ ಸಿಬ್ಬಂದಿ ಜತೆ ಬಂದು, ಚಿರತೆ ಓಡಾಡಿದ ಹೆಜ್ಜೆ ಗುರುತು ಗುರುತಿಸಿ 40 ರಿಂದ 100 ಮೀ. ವ್ಯಾಪ್ತಿಯಲ್ಲಿ ಚಿರತೆ ಇರುವುದನ್ನು ಊಹಿಸಿ ಹುಡುಕಾಟ ಪ್ರಾರಂಭಿಸಿದರು.
ನಂತರ ಇಲಾಖೆಗೆ ಕರೆ ಮಾಡಿ, ಸ್ಥಳದಲ್ಲಿ ಬೋನು ಇಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.
ನಗರಕ್ಕೆ ಹೊಂದಿಕೊಂಡಿರುವ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡಿರುವುದರಿಂದ ಯಾವಾಗ ನಗರಕ್ಕೆ ಬರುತ್ತದೋ ಎಂದು ನಾಗರಿಕರು ಆತಂಕದಲ್ಲಿದ್ದಾರೆ.