ಮಂಗಳೂರು: ಕೇರಳ ಮೂಲದ ವ್ಯಕ್ತಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ ಹನಿಟ್ರ್ಯಾಪ್ ಜಾಲಕ್ಕೆ ಕೆಡವುತ್ತಿದ್ದ ನಗರದ ಸುರತ್ಕಲ್ ಮೂಲದ ತಂಡವನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ನ ನಾಸಿಫ್ ಅಲಿಯಾಸ್ ಅಬ್ದುಲ್ ಖಾದರ್ ನಾಜಿಫ್, ಇಕ್ಬಾಲ್ ಅಲಿಯಾಸ್ ಮಹಮ್ಮದ್ ಇಕ್ಬಾಲ್, ರೇಶ್ಮಾ ಅಲಿಯಾಸ್ ನೀಮಾ, ಜೀನತ್ ಬಂಧಿತರು. ಇದರಲ್ಲಿ ಮಹಿಳೆಯರಿಬ್ಬರೂ ಸೋದರಿಯರಾಗಿದ್ದು ಆರೋಪಿ ಇಕ್ಬಾಲ್ನ ಪತ್ನಿ ಜೀನತ್.
ಆರೋಪಿಗಳು ಎಕ್ಸ್ಯುವಿ ೫೦೦ ವಾಹನ ಹೊಂದಿದ್ದು ಒಬ್ಬೊಬ್ಬರಲ್ಲೂ ಐದಾರು ಕ್ರೆಡಿಟ್ ಕಾರ್ಡ್ಗಳಿದ್ದವು, ಐಷಾರಾಮಿ ಜೀವನಕ್ಕಾಗಿ ಇಂತಹ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರು. ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಮೊಬೈಲ್ ಫೋನ್ಗಳನ್ನು ಪರಿಶೀಲಿಸಿದಾಗ ಅದರಲ್ಲಿ ಕೆಲವು ವ್ಯಕ್ತಿಗಳನ್ನು ಬ್ಲಾಕ್ ಮೇಲ್ ಮಾಡಿರುವ ಮಾಹಿತಿ, ಚಾಟ್ ಹಿಸ್ಟರಿ ಸಿಕ್ಕಿದೆ. ಅದರಂತೆ ಕನಿಷ್ಠ ಆರು ಪ್ರಕರಣಗಳಲ್ಲಿ ಆರೋಪಿಗಳು ಪಾಲ್ಗೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಬಹುತೇಕ ಬಲಿಪಶುಗಳು ಕೇರಳ ಮೂಲದ ವ್ಯಕ್ತಿಗಳಿರಬಹುದು ಎಂದು ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಈಗಾಗಲೇ ಇಬ್ಬರು ವ್ಯಕ್ತಿಗಳನ್ನು ಸಂಪರ್ಕಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೈಕ್ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
ಯುವತಿಯರಿಬ್ಬರೂ ಫೇಸ್ಬುಕ್ ಮೂಲಕ ಅಪರಿಚಿತರನ್ನು ಪರಿಚಯಿಸಿಕೊಂಡು ತಾವು ಒಬ್ಬಂಟಿಯಾಗಿರುವುದಾಗಿ ನಂಬಿಸಿ ಮನೆಗೆ ಆಹ್ವಾನಿಸುತ್ತಿದ್ದರು. ಹಾಗೆ ಬರುವವರ ವಾಹನದಲ್ಲೇ ಸುರತ್ಕಲ್ನಿಂದ ತಮ್ಮ ಮನೆಗೆ ಹೋಗುತ್ತಿದ್ದರು. ಅವರನ್ನು ಹಿಂಬಾಲಿಸಿಕೊಂಡು ಇತರ ಆರೋಪಿಗಳು ಬಂದು ಮನೆಗೆ ಬಂದವರಿಗೆ ಹಲ್ಲೆ ನಡೆಸಿ, ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹಣ ನೀಡದೆ ಹೋದರೆ ಅವರ ಮಾನ ಹರಾಜು ಹಾಕುತ್ತೇವೆ, ಅತ್ಯಾಚಾರದ ಕೇಸ್ ನೀಡುತ್ತೇವೆ ಎಂದು ಬೆದರಿಕೆಯೊಡ್ಡುತ್ತಿದ್ದರು.
ಕುಂಬಳೆ ಮೂಲದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಐದು ಲಕ್ಷ ರೂ. ಡಿಮಾಂಡ್ ಮಾಡುವ ಬಗ್ಗೆ ಇತ್ತೀಚೆಗಷ್ಟೇ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಈಗ ನಾಲ್ವರನ್ನು ಬಂಧಿಸಲಾಗಿದೆ, ಇನ್ನೂ ಹಲವರು ಇದರಲ್ಲಿ ಪಾಲ್ಗೊಂಡಿದ್ದಾರೆ, ಅವರನ್ನು ಬಂಧಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಮದ್ವೆಗೆ ಬರ್ದಿದ್ರೂ ಉಡುಗೊರೆ ಹಾಕಿ! ಲಗ್ನಪತ್ರಿಕೆಯಲ್ಲೇ ಗೂಗಲ್ ಪೇ, ಫೋನ್ ಪೇ ಕ್ಯೂಆರ್ ಕೋಡ್