ಹೊಳಲ್ಕೆರೆ: ಪಾಲಕರು ಶಾಲೆ ಹಾಗೂ ಶಿಕ್ಷಕರ ಜತೆ ಸದಾ ಸಂಪರ್ಕದಲ್ಲಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಪರಿಶೀಲಿಸಿದರೆ ಮಾತ್ರ ಗುಣಮಟ್ಟದ ಶಿಕ್ಷಣ ಸಿಗಲು ಸಾಧ್ಯ ಎಂದು ಎಸ್ಜೆಎಂ ಕಾರ್ಯನಿರ್ವಹಣಾಧಿಕಾರಿ ದೊರೆಸ್ವಾಮಿ ಹೇಳಿದರು.
ತಾಲೂಕಿನ ರಾಮಗಿರಿ ಎಸ್ಜೆಎಂ ಶಾಲೆಯ ಜಯದೇವ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಸ್ಜೆಎಂ ಕಲಾದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ಪಾಲಕರ ಗುರಿಯಾಗಬೇಕು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇಲ್ಲಿನ ಶಾಲೆ ಪ್ರತಿ ವರ್ಷ ಶೇ.100ರಷ್ಟು ಫಲಿತಾಂಶ ಪಡೆಯುವ ಮೂಲಕ ಮುರುಘಾ ಮಠದ ಕೀರ್ತಿ ಹೆಚ್ಚಿಸಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಎಸ್ಜೆಎಂ ವಿದ್ಯಾಪೀಠ ಹಾಗೂ ಶ್ರೀ ಶಿವಮೂರ್ತಿ ಮುರುಘಾ ಶರಣರು ಶ್ರಮಿಸುತ್ತಿದ್ದಾರೆ ಎಂದರು.
ಎಸ್ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯ ರೂಪಿಸಬೇಕಾಗಿರುವುದು ಪಾಲಕರ ಕರ್ತವ್ಯ. ಈ ನಿಟ್ಟಿನಲ್ಲಿ ಶಿಕ್ಷಕರ ಶ್ರಮ ಕೂಡ ಅಗತ್ಯವಿದೆ. ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಈ ಸಂದರ್ಭದಲ್ಲಿ ಮಕ್ಕಳ ಮೇಲೆ ಒತ್ತಡ ಹಾಕಬಾರದು ಎಂದರು.
ಎಸ್ಜೆಎಂ ಶಾಲೆ ಹಳೇ ವಿದ್ಯಾರ್ಥಿನಿ ಜಿ.ಪಿ.ಪ್ರಾರ್ಥನಾ ಅವರನ್ನು ಗೌರವಿಸಲಾಯಿತು. ಗ್ರಾಪಂ ಅಧ್ಯಕ್ಷ ಆರ್.ಶಿವಕುಮಾರ್, ತಾಪಂ ಸದಸ್ಯ ಬೆಳ್ಳಿ ಶಿವಕುಮಾರ್, ವಿಶೇಷಾಧಿಕಾರಿ ಪ್ರಫುಲ್ಲ ನಿಜಗುಣಸ್ವಾಮಿ, ಎಸ್ಜೆಎಂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಎಚ್.ಪಿ.ನಿಜಗುಣಸ್ವಾಮಿ, ಸದಸ್ಯರಾದ ಸಿದ್ದಲಿಂಗಯ್ಯ, ಉಮಾಪತಿ, ತೋಂಟದಾರ್ಯ, ಮುಖ್ಯಶಿಕ್ಷಕರಾದ ರೇವಣ್ಣ, ರುದ್ರೇಶ್, ಗಿರೀಶ್ ಇತರರಿದ್ದರು.