ಹಿರಿಯೂರು: ಇಲ್ಲಿನ ಪುರಾತನ ಪ್ರಸಿದ್ಧ ಶ್ರೀ ತೇರುಮಲ್ಲೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಫೆ.10ರಂದು ಜರುಗಲಿದೆ.
ಜಾತ್ರೆ ಅಂಗವಾಗಿ ಶ್ರೀಸ್ವಾಮಿಗೆ ತಂಬಿಟ್ಟಿನ ಆರತಿ ಸೇವೆ, ಉತ್ಸವ ಮೂರ್ತಿ ಮೆರವಣಿಗೆ, ಪಂಚಾಮೃತ ಅಭಿಷೇಕ ಇತರ ಧಾರ್ಮಿಕ ಕಾರ್ಯಗಳು ಜರುಗಲಿವೆ.
ಫೆ.10ರ ಬೆಳಗ್ಗೆ 9ಕ್ಕೆ ಮಾಘ ಶುದ್ಧ ಪಾಡ್ಯಮಿ ಶುಭ ಗಳಿಗೆಯಲ್ಲಿ ದೇಗುಲದಲ್ಲಿರುವ ಶಿವಧನಸ್ಸನ್ನು ವೇದಾವತಿ ನದಿಗೆ ಕೊಂಡೊಯ್ದು ಗಂಗಾಪೂಜೆ ನೆರವೇರಿಸಲಾಗುತ್ತದೆ. ಬಳಿಕ ದೇಗುಲ ಆವರಣದಲ್ಲಿ ಹೋಮ-ಹವನ, ಪುಣ್ಯಾಹ, ಗಣಪತಿ ಪೂಜೆ, ಮಹಾಮಂಗಳಾರತಿ ಜರುಗಲಿದೆ. ನಂತರ ಬೀರೇನಹಳ್ಳಿ ಮಜುರೆ ಕರಿಯಣ್ಣನಹಟ್ಟಿ ವೀರ ಕರಿಯಣ್ಣ ದೇವರ ನೇತೃತ್ವದಲ್ಲಿ ಮಧ್ಯಾಹ್ನ 12 ಗಂಟೆಗೆ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಂಗಳ ವಾದ್ಯಗಳೊಂದಿಗೆ ರಥಾರೋಹಣ ನಡೆಸಲಾಗುತ್ತದೆ.
ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಸಾವಿರಾರು ಭಕ್ತರ ಅನುಕೂಲಕ್ಕಾಗಿ ಮುಜರಾಯಿ ಇಲಾಖೆ ಹಾಗೂ ತಾಲೂಕು ಆಡಳಿತ ಅಗತ್ಯ ಕ್ರಮ ಕೈಗೊಂಡಿದೆ.
ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿಕೆ: ಐತಿಹಾಸಿಕ ತೇರುಮಲ್ಲೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಕ್ರಿಯಾಯೋಜನೆ ರೂಪಿಸಿದ್ದು, ಇದರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಮುಜರಾಯಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದನ್ನು ರಾಜ್ಯದ ಮಾದರಿ ಧಾರ್ಮಿಕ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.