ಹಿರಿಯೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಶುಪಾಲಕರಿಗೆ ನೆರವಾಗಲು ಜಾರಿಗೆ ತಂದಿದ್ದ ಅನುಗ್ರಹ ಯೋಜನೆ ಮುಂದುವರಿಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಆಕಸ್ಮಿಕವಾಗಿ ಕುರಿ, ಮೇಕೆ, ಹಸು, ಎಮ್ಮೆ ಸತ್ತರೆ ಗರಿಷ್ಠ ಹತ್ತು ಸಾವಿರ ರೂ. ವರೆಗೆ ಪರಿಹಾರ ನೀಡಲು ಅನುಗ್ರಹ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು.
ವಿಕೆ ಗುಡ್ಡ ಘಟನೆ ಉಲ್ಲೇಖಿಸಿ ಪತ್ರ: ಹಿರಿಯೂರು ತಾಲೂಕಿನ ವೇಣುಕಲ್ಲು (ವಿ.ಕೆ.) ಗುಡ್ಡ ಗ್ರಾಮದಲ್ಲಿ ಇತ್ತೀಚೆಗೆ ಕರಬೂಜ ಹಣ್ಣು ತಿಂದು 50 ಕುರಿಗಳು ಸಾವಿಗೀಡಾಗಿದ್ದವು. ಈ ರೀತಿಯ ಪ್ರಕರಣಗಳು ರಾಜ್ಯದಲ್ಲಿ ಸಂಭವಿಸುತ್ತಿದ್ದು, ಇದರಿಂದ ಜಾನುವಾರು, ಕುರಿ, ಮೇಕೆ ಸಾಕಣಿದಾರರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇವರ ನೆರವಿಗಾಗಿ ಅನುಗ್ರಹ ಯೋಜನೆ ಜಾರಿಗೊಳಿಸಲಾಗಿತ್ತು. ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ರದ್ದು ಪಡಿಸಬಾರದು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮಾಜಿ ಸಚಿವ ಡಿ.ಸುಧಾಕರ್ ಹೇಳಿಕೆ: ಬಯಲುಸೀಮೆಯಲ್ಲಿನ ಪಶುಪಾಲಕರು ಸಂಕಷ್ಟದಲ್ಲಿದ್ದು, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಅನುಗ್ರಹ ಯೋಜನೆ ರುದ್ದು ಪಡಿಸಬಾರದು. ಸಂಕಷ್ಟದ ಸಮಯದಲ್ಲಿ ಪಶುಪಾಲಕರ ಕಣ್ಣೀರು ಹೊರೆಸುವ ಕೆಲಸ ರಾಜ್ಯ ಸರ್ಕಾರದ ಆದ್ಯ ಕರ್ತವ್ಯ ಆಗಬೇಕು. ಈ ಹಿನ್ನೆಲೆಯಲ್ಲಿ ಈ ಯೋಜನೆ ಮುಂದುವರಿಸಬೇಕು.