ಹಿರಿಯೂರು: ಒಂದು ದಿನದ ಕರ್ಫ್ಯೂ ಜಾರಿಯಿಂದ ಭಾನುವಾರದ ನಗರ ಹಾಗೂ ತಾಲೂಕು ಸಂಪೂರ್ಣ ಸ್ತಬ್ಧವಾಗಿತ್ತು. ಜನ, ವಾಹನ ಸಂಚಾರವಿಲ್ಲದೆ ಹೆದ್ದಾರಿ ಹಾಗೂ ನಗರದ ಮುಖ್ಯ ರಸ್ತೆಗಳು ಬಿಕೋ ಎನ್ನುತ್ತಿದ್ದವು.
ಲಾಕ್ಡೌನ್ ಸಡಿಲಿಕೆಯಿಂದ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದ ವ್ಯಾಪಾರ, ವಹಿವಾಟು ಹಾಗೂ ಜನಜೀವನ ಕರ್ಫ್ಯೂ ಜಾರಿಯಿಂದ ಮತ್ತೆ ಮಂಕಾಯಿತು. ಅಂಗಡಿ, ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ಲಾರಿ, ಬಸ್ಸುಗಳ ಸಂಚಾರವಿಲ್ಲದೆ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸ್ತಬ್ಧವಾಗಿತ್ತು. ಹೆಚ್ಚಿನ ಪೊಲೀಸ್ ಕಾವಲು ಚೆಕ್ಪೋಸ್ಟ್ಗಳಿಲ್ಲದಿದ್ದರೂ ಜನ, ವಾಹನ ಸಂಚಾರ ವಿರಳವಾಗಿತ್ತು.