ಹಿರಿಯೂರು: ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯದಿಂದ ವೇದಾವತಿ ನದಿ ಮೂಲಕ ಧರ್ಮಪುರ ಕೆರೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಕಾಲ ಸನ್ನಿಹಿತವಾಗಿದೆ.
ಇಲ್ಲಿನ ಶಾಸಕರ ಕಚೇರಿಯಲ್ಲಿ ಶಾಸಕಿ ಕೆ.ಪೂರ್ಣಿಮಾ ಅಧ್ಯಕ್ಷತೆಯಲ್ಲಿ ಭಾನುವಾರ ಜರುಗಿದ ಧರ್ಮಪುರ ಹೋಬಳಿ ರೈತರು, ನೀರಾವರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ನೀರಾವರಿ ಯೋಜನೆ ಅನುಷ್ಠಾನದ ಕುರಿತು ಚರ್ಚಿಸಲಾಯಿತು.
ತಾಲೂಕಿನ ಹೊಸಹಳ್ಳಿ ವೇದಾವತಿ ನದಿಪಾತ್ರದಲ್ಲಿ ಬ್ಯಾರೇಜ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಏತ ನೀರಾವರಿ ಯೋಜನೆ ಮೂಲಕ ಧರ್ಮಪುರ ಕೆರೆಗೆ ನೀರು ಹರಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಈ ಬಗ್ಗೆ ಶೀಘ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಒಂದು ವರ್ಷದಲ್ಲಿ ಯೋಜನೆ ಕಾರ್ಯಗತಗೊಳಿಸಲು ತೀರ್ಮಾನಿಸಲಾಯಿತು.
ಶಾಸಕಿ ಪೂರ್ಣಿಮಾ ಮಾತನಾಡಿ, ತುರ್ತು ಕುಡಿವ ನೀರಿಗಾಗಿ ಹೊಸಹಳ್ಳಿ ಬ್ಯಾರೇಜ್ನಿಂದ ಲಿಫ್ಟ್ ಇರಿಗೇಷನ್ ಮೂಲಕ ಧರ್ಮಪುರ ಕೆರೆಗೆ ಸುಲಭವಾಗಿ ನೀರು ಹರಿಸಬಹುದು ಎಂದು ಹೇಳಿದರು.
ಬಿಜೆಪಿ ಮುಖಂಡ ಡಿ.ಟಿ.ಶ್ರೀನಿವಾಸ್, ಮಂಡಲ ಅಧ್ಯಕ್ಷ ವಿಶ್ವನಾಥ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಸ್.ರಘುನಾಥ್, ತಾಪಂ ಮಾಜಿ ಅಧ್ಯಕ್ಷ ಬಿ.ಎಚ್.ವೆಂಕಟೇಶಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಶಿವಣ್ಣ, ಹಾರ್ಡ್ವೇರ್ ಶಿವಣ್ಣ, ದೊಡ್ಡಯ್ಯ, ಬೆನಕನಹಳ್ಳಿ ಶಿವಮೂರ್ತಿ, ಸಕ್ಕರ ಗಿರೀಶ್, ಶ್ರವಣಗೆರೆ ರವಿಶಂಕರ್, ಹನುಮಂತರಾಯಪ್ಪ, ಮಂಜುನಾಥ್, ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಎಪಿಎಂಸಿ ಅಧ್ಯಕ್ಷ ಗೊಲ್ಲಹಳ್ಳಿ ಜಗನ್ನಾಥ್, ಅರಳಿಕೆರೆ ತಿಪ್ಪೇಸ್ವಾಮಿ ಇತರರಿದ್ದರು.
ಕನಸಲ್ಲೂ ನೀರಿನ ಭಯ: ನಮ್ಮ ಜಲಾಶಯದ ನೀರನ್ನು ಯಾರೋ ತೆಗೆದುಕೊಂಡು ಹೋದಂತೆ ಕನಸು ಬೀಳುತ್ತದೆ. ಇದು ನನ್ನಲ್ಲಿ ಭಯಕ್ಕೆ ಕಾರಣವಾಗುತ್ತಿದೆ ಎಂದು ಶಾಸಕಿ ಕೆ.ಪೂರ್ಣಿಮಾ ತಿಳಿಸಿದರು. ನೀರು ರಾಷ್ಟ್ರೀಯ ಸಂಪತ್ತು, ಎಲ್ಲರಿಗೂ ಹಕ್ಕಿದೆ. ತಾಲೂಕಿನ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಜಲಸಂಪನ್ಮೂಲ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ. ನೀರಿನ ವಿಚಾರದಲ್ಲಿ ದ್ವೇಷ ಸಾಧಿಸದೆ ಸಹೋದರತೆ, ಸಹಬಾಳ್ವೆ ರೂಢಿಸಿಕೊಳ್ಳಬೇಕು ಎಂದರು.