ಹಿರಿಯೂರು: ಆರೋಗ್ಯಯುತ ಜೀವನಕ್ಕೆ ಆಯುಷ್ ಚಿಕಿತ್ಸಾ ಪದ್ಧತಿ ಸಂಜೀವಿನಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ನಾಗೇಂದ್ರನಾಯ್ಕ ಹೇಳಿದರು.
ನಗರದ ಬಸವರಾಜ್ ನರ್ಸಿಂಗ್ ಕಾಲೇಜ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಯುಷ್ ಚಿಕಿತ್ಸಾ ಪದ್ಧತಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಯುಷ್ ಚಿಕಿತ್ಸಾ ವಿಧಾನ ಅತ್ಯಂತ ಸುರಕ್ಷಿತವಾಗಿದ್ದು, ಪ್ರಸ್ತುತ ಹೆಚ್ಚು ಪ್ರಚಲಿತದಲ್ಲಿದೆ. ಸದೃಢ ಆರೋಗ್ಯ ಹೊಂದಲು, ದೀರ್ಘಕಾಲದ ಬದುಕಿಗೆ ಎಲ್ಲರೂ ಆಯುರ್ವೇದ ಜೀವನ ಶೈಲಿ ಪಾಲಿಸುವ ಅಗತ್ಯವಿದೆ ಎಂದರು.
ಡಾ.ಕೆ.ಎಲ್.ವಿಶ್ವನಾಥ್ ಮಾತನಾಡಿ, ಆಯುರ್ವೇದ, ಯುನಾನಿ, ಯೋಗ, ಪ್ರಕೃತಿ ಮತ್ತು ಹೋಮಿಯೋಪಥಿ ಈ ಐದು ವಿಧದ ಚಿಕಿತ್ಸೆಯನ್ನು ಆಯುಷ್ ಎಂದು ಕರೆಯಲಾಗುತ್ತದೆ. ಇದು ಅಡ್ಡಪರಿಣಾಮ ರಹಿತ ಉತ್ತಮ ಚಿಕಿತ್ಸಾ ವಿಧಾನವಾಗಿದೆ ಎಂದು ತಿಳಿಸಿದರು.
ತಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಡಾ.ಜೀವಿತೇಶ್ ರೆಡ್ಡಿ, ಡಾ. ಚಂಪಾ, ಡಾ.ಗಿರೀಶ್, ಡಾ.ರಘುವೀರ್, ಡಾ.ಶಂಕರ್, ಡಾ.ಉಮೇಶ್, ಡಾ.ಶಿವಕುಮಾರ್, ಡಾ.ನಾರದಮುನಿ ಇತರರಿದ್ದರು.