ಬೆಂಗಳೂರು: 2020-21ನೇ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲು ಹೈ ಕೋರ್ಟ್ ತಡೆ ನೀಡಿದೆ. ಈಗಾಗಲೇ ರಾಜ್ಯ ಸರ್ಕಾರವು ದ್ವಿತೀಯ ಪಿಯು ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದು ಮಾಡಿದೆ ಆದರೆ ರಿಪೀಟರ್ಸ್ ಪರೀಕ್ಷೆ ಬರೆಯಬೇಕು ಎಂದು ಆದೇಶಿಸಲಾಗಿದ್ದು, ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ದ್ವಿತೀಯ ಪಿಯು ಪರೀಕ್ಷೆ ರದ್ದು ಮಾಡಲಾಗಿದೆ. ಆದರೆ ರಿಪೀಟರ್ಸ್ ಪರೀಕ್ಷೆ ಬರೆಯಬೇಕಿದೆ. ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳಿಗೆ ಅವರ ಎಸ್ಎಸ್ಎಲ್ಸಿ ಮತ್ತು ಪ್ರಥಮ ಪಿಯು ಅಂಕವನ್ನಾಧರಿಸಿದ ಫಲಿತಾಂಶ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಆದರೆ ಈ ರೀತಿಯ ತಾರತಮ್ಯ ಬೇಡ, ನಮ್ಮ ಪರೀಕ್ಷೆಯನ್ನೂ ರದ್ದು ಮಾಡಿ ಎಂದು ಅನೇಕ ರಿಪೀಟರ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಮಾಡಿರುವ ಹೈಕೋರ್ಟ್ನ ವಿಭಾಗೀಯ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.
ಸರ್ಕಾರವು ಸಮಗ್ರ ನಿರ್ಧಾರ ತೆಗೆದುಕೊಳ್ಳುವವರೆಗೆ ಫಲಿತಾಂಶ ಪ್ರಕಟಿಸುವುದು ಬೇಡ ಎಂದು ನ್ಯಾ.ಬಿ.ವಿ. ನಾಗರತ್ನ ನೇತೃತ್ವದ ಪೀಠ ಆದೇಶಿಸಿದೆ. ಸರ್ಕಾರವು ಈಗಾಗಲೇ 12 ತಜ್ಞರ ಸಮಿತಿ ರಚಿಸಿದೆ. ರಾಜ್ಯದಲ್ಲಿ 5.92 ಲಕ್ಷ ಪಿಯು ವಿದ್ಯಾರ್ಥಿಗಳ ಫಲಿತಾಂಶ ಹೊರಬರಬೇಕಿದೆ. ಹಾಗೆಯೇ 76 ಸಾವಿರ ರಿಪೀಟರ್ಸ್ ಫಲಿತಾಂಶವೂ ಬರಬೇಕಿದೆ. ಇನ್ನು 15 ದಿನಗಳೊಳಗೆ ಸಮಿತಿ ವರದಿ ನೀಡಲಿದೆ ಎಂದು ಜಂಟಿ ನಿರ್ದೇಶಕ ಕೃಷ್ಣಪ್ಪ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ವಿಚಾರಣೆಯನ್ನು ಜುಲೈ 5ಕ್ಕೆ ಮುಂದೂಡಲಾಗಿದೆ.
ಇಳಿಯುತ್ತಲೇ ಇದೆ ಚಿನ್ನದ ದರ; ಇಂದು ಎಷ್ಟಿದೆ ಗೊತ್ತಾ?
ನಾಲ್ಕು ವರ್ಷಗಳಿಂದ ಪತ್ನಿ ಪತ್ತೆಯಲ್ಲ, ವಿಳಾಸ ಗೊತ್ತಿಲ್ಲದಿದ್ದರೆ ಡಿವೋರ್ಸ್ ನೋಟಿಸ್ ಕಳಿಸೋದು ಹೇಗೆ?