ಮಂಡ್ಯ: ಕರೊನಾಗೆ ಮದ್ದಿಲ್ಲ, ಚಿಕಿತ್ಸೆ ಸಿಗುತ್ತಿಲ್ಲ, ಹಾಸಿಗೆ-ಐಸಿಯು ಲಭ್ಯವಿಲ್ಲ ಎಂಬೆಲ್ಲದರ ನಡುವೆ ಇಲ್ಲೊಂದು ಕಡೆ ಕರೊನಾಗೆ ಅವಧಿ ಮುಗಿದ ಔಷಧ ನೀಡುತ್ತಿರುವುದು ಬೆಳಕಿಗೆ ಬಂದಿದ್ದು, ಅದರಿಂದಲೇ ಸೋಂಕಿತರ ಸಾವು ಹೆಚ್ಚಾಗುತ್ತಿದೆ ಎಂದು ಶಾಸಕರೊಬ್ಬರು ಆರೋಪ ಮಾಡಿದ್ದಾರೆ. ಮಾತ್ರವಲ್ಲ ಅವಧಿ ಮುಗಿದ ಔಷಧ ನೀಡಲು ಸರ್ಕಾರವೇ ಅನುಮತಿ ನೀಡಿರುವ ಕ್ರಮಕ್ಕೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕರೊನಾ ಸೋಂಕಿತರಿಗೆ ರೆಮ್ಡೆಸಿವಿರ್ ಎಂಬ ಇಂಜೆಕ್ಷನ್ ನೀಡಲಾಗುತ್ತಿದೆ. ಆದರೆ ಹಾಗೆ ನೀಡಲಾಗುತ್ತಿರುವ ರೆಮ್ಡೆಸಿವಿರ್ ಇಂಜೆಕ್ಷನ್ ಅವಧಿ ಮೀರಿದ್ದರೂ ಅದನ್ನು ನೀಡಲು ಸರ್ಕಾರ ಅನುಮತಿ ನೀಡಿದೆ. ಅವಧಿ ಮೀರಿದ ಔಷಧ ಒಂದು ರೀತಿಯಲ್ಲಿ ವಿಷದಂತೆ. ಅದಾಗ್ಯೂ ಅಂಥ ಔಷಧವನ್ನೇ ಸೋಂಕಿತರಿಗೆ ನೀಡುತ್ತಿರುವುದರಿಂದ ಸಾವಿನ ಪ್ರಕರಣ ಹೆಚ್ಚಾಗುತ್ತಿದೆ ಎಂದು ಮಂಡ್ಯ ಜಿಲ್ಲೆ ನಾಗಮಂಗಲದ ಶಾಸಕ ಸುರೇಶ್ ಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅವಧಿ ಮುಗಿದಿರುವ ಔಷಧದ ಎಕ್ಸ್ಪೈರಿ ಡೇಟ್ ವಿಸ್ತರಿಸಿ ಸರ್ಕಾರ ಅದನ್ನು ಬಳಸಲು ಅವಕಾಶ ಮಾಡಿಕೊಟ್ಟಿದೆ. ಸರ್ಕಾರ ಆದೇಶ ನೀಡಿದ ಮಾತ್ರಕ್ಕೆ ಅವಧಿ ಮೀರಿದ ಔಷಧದ ಗುಣಮಟ್ಟ ಹೆಚ್ಚಾಗಲು ಹೇಗೆ ಸಾಧ್ಯ? ಎಕ್ಸ್ಪೈರಿ ಡೇಟ್ ಆಗಿದ್ದರೂ ಅಂಥ ಔಷಧವನ್ನು ರೋಗಿಗಳಿಗೆ ನೀಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿರುವ ಅವರು, ಸರ್ಕಾರ ಈ ರೀತಿ ನಿರ್ಲಕ್ಷ್ಯ ಧೋರಣೆಯಿಂದಾಗಿ ಜನರ ಪ್ರಾಣದ ಜತೆ ಚೆಲ್ಲಾಟ ಆಡುತ್ತಿದೆ ಎಂದು ಆರೋಪಿಸಿದ್ದಾರೆ.
ತಮ್ಮ ತಾಲೂಕಿನಲ್ಲಿ ಈ ಇಂಜೆಕ್ಷನ್ ಉಪಯೋಗಿಸಬಾರದು ಎಂದು ಸೂಚನೆ ನೀಡಿರುವ ಶಾಸಕರು, ಈ ಔಷಧದ ಕುರಿತು ಸರ್ಕಾರ ನೀಡಿರುವ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಮಾತ್ರವಲ್ಲ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಆದೇಶ ಹಿಂಪಡೆಯದಿದ್ದರೆ ಈ ಬಗ್ಗೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿಯವರಿಗೆ ಪತ್ರ ಬರೆಯಲಾಗುವುದು ಎಂದೂ ಹೇಳಿದ್ದಾರೆ.
ಉಸಿರುಗಟ್ಟಿ ನರಳಾಡಿದ ಕೋವಿಡ್ ಸೋಂಕಿತ; ಮಾಧ್ಯಮದವರಿಗೆ ತಿಳಿಸುತ್ತೇವೆ ಎಂದ ಮೇಲೆ ಆಸ್ಪತ್ರೆಗೆ ದಾಖಲಿಸಿಕೊಂಡ ಸಿಬ್ಬಂದಿ
ಶವಸಂಸ್ಕಾರಕ್ಕೆ ಏನೂ ಸಮಸ್ಯೆ ಇಲ್ಲ, ಸುಡಲಿಕ್ಕೆ 4 ಎಕರೆ ಜಾಗದಲ್ಲಿ ವ್ಯವಸ್ಥೆ ಮಾಡಿದ್ದೇವೆ: ಸಚಿವ ವಿ. ಸೋಮಣ್ಣ