ಹುಬ್ಬಳ್ಳಿ: ಹೆಲಿಕಾಪ್ಟರ್ ಮೂಲಕ ಚಾರ್ಧಾಮ್ ಯಾತ್ರೆ ಮಾಡಿಸುವುದಾಗಿ ನಂಬಿಸಿದ ಖದೀಮರು, ಪತಿ-ಪತ್ನಿಯಿಂದ ಆನ್ಲೈನ್ ಮೂಲಕ 8.42 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಹೆಬ್ಬಳ್ಳಿಯ ಉಮೇಶ ಮತ್ತವರ ಪತ್ನಿ ಸೇರಿ ಕುಟುಂಬಸ್ಥರು, ಚಾರ್ಧಾಮ್ ಯಾತ್ರೆ (ಯಮನೋತ್ರಿ, ಗಂಗೋತ್ರಿ, ಕೇದಾರ, ಬದರಿ) ಮಾಡಲು ನಿರ್ಧರಿಸಿದ್ದರು.
ಇನ್ಸ್ಟಾಗ್ರಾಂನಲ್ಲಿ ಪವನ್ ಹಂಸ್ ಟೂರ್ ಏಜೆನ್ಸಿ ಎಂಬ ಜಾಹೀರಾತನ್ನು ನೋಡಿದ್ದಾರೆ. ಕೂಡಲೇ ಆಗಂತುಕರು ಇದನ್ನು ಗಮನಿಸಿ ಉಮೇಶ ಅವರನ್ನು ಸಂಪರ್ಕಿಸಿದ್ದಾರೆ. ಹೆಲಿಕಾಪ್ಟರ್ ಮೂಲಕ ಚಾರ್ಧಾಮ್ ಯಾತ್ರೆ ಮಾಡಿಸುವುದಾಗಿ ನಂಬಿಸಿ, ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎನ್ಸಿಬಿ ಹೆಸರಲ್ಲಿ ಧೋಖಾ
ಕೋರಿಯರ್ ಮೂಲಕ ನಿಮ್ಮ ಹೆಸರಿನಲ್ಲಿ ಡ್ರಗ್ಸ್ ಪಾರ್ಸಲ್ ಕಳುಹಿಸಿದ್ದಾರೆ ಎಂದು ನಗರದ ಕೇಶ್ವಾಪುರದ ಮಹಿಳೆಯೊಬ್ಬರಿಗೆ ಎನ್ಸಿಬಿ ಹೆಸರಿನಲ್ಲಿ ಹೆದರಿಸಿದ್ದಾರೆ. ಅಲ್ಲದೆ, ನಿಮ್ಮ ಹೆಸರಿನಲ್ಲಿ ಮೂರು ಖಾತೆಗಳನ್ನು ತೆರೆದಿದ್ದು, ಪರಿಶೀಲನೆ ಮಾಡಬೇಕು ಎಂದು ಹೇಳಿ ಹಂತ ಹಂತವಾಗಿ 1.74 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.