-ನರೇಂದ್ರ ಎಸ್.ಮರಸಣಿಗೆ ಹೆಬ್ರಿ
ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಹೆಬ್ರಿಯಿಂದ ಹಿರಿಯಡ್ಕ ತನಕ ಸಂಚಾರ ತೀವ್ರ ಕಷ್ಟವಾಗಿದೆ. ಸಣ್ಣ ಮೋರಿಗಳ ಜಾಗದಲ್ಲಿ ಹೊಂಡ ಗುಂಡಿಗಳಿಂದ ವಾಹನ ಸವಾರರಿಗೆ ನಿತ್ಯ ಕಿರಿಕಿರಿ. ದಿನನಿತ್ಯ ಸಾವಿರಾರು ವಾಹನ ಓಡಾಡುವ ಈ ರಸ್ತೆಯಲ್ಲಿ ಕೆಸರು, ಹೊಂಡಗುಂಡಿಯದ್ದೇ ಸಮಸ್ಯೆ. ಎಚ್ಚರಿಕೆ ನೀಡುವ ಸೂಚನಾ ಫಲಕ ಕಾಣಿಸುವುದಿಲ್ಲ.
ಆಂಬುಲೆನ್ಸ್ಗಳಿಗೆ ಸಂಕಷ್ಟ
ಶಿವಮೊಗ್ಗ ಹಾಗೂ ದಾವಣಗೆರೆ ಬದಿಯಿಂದ ರೋಗಿಗಳನ್ನು ಕರೆತರುವ ಆಂಬುಲೆನ್ಸ್ಗಳು ರಸ್ತೆಯಲ್ಲಿ ಟಡಿಒಗಡಿಗೆ ಸಿಗುವ ರಸ್ತೆಯ ಅಲ್ಲಲ್ಲಿ ಸಿಗುವ ಗುಂಡಿಗಳನ್ನು ತಪ್ಪಿಸಿ ಬರುವಾಗ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ನಿತ್ಯ ಹತ್ತಾರು ಆಂಬುಲೆನ್ಸ್ಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ.
ಈ ಸಲ ಮಳೆಗಾಲ ರಂಭವಾಗಿರುವುದು ಜುಲೈಯಲ್ಲಿ. ತಾತ್ಕಾಲಿಕವಾಗಿ ಜೂನ್ನಲ್ಲೇ ಡಾಂಬರು ಹಾಕಬಹುದಾಗಿತ್ತು. ಸಕಾಲದಲ್ಲಿ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರು ಸೂಕ್ತ ಕ್ರಮ ವಹಿಸದಿರುವುದರಿಂದ ಸಮಸ್ಯೆಯಾಗಿದೆ.
ಅಪಾಯಕಾರಿ ಮರಗಳು
ಕೆಲವೆಡೆ ಮರಗಳು ಅಪಾಯಕಾರಿ ಸ್ಥಿತಿಯಲ್ಲಿ ರಸ್ತೆಗೆ ವಾಲಿಕೊಂಡಿವೆ. ಮರದ ಬುಡ ಬಿಡಿಸಿದ ದುರ್ಬಲ ಸ್ಥಿತಿಯಲ್ಲಿವೆ. ಕೆಲವು ದಿನಗಳ ಹಿಂದೆ ಪೆರ್ಡೂರು ಪಾಡಿಗಾರದಲ್ಲಿ ರಸ್ತೆಗೆ ಮರ ಬಿದ್ದು ಸಮಸ್ಯೆಯಾಗಿತ್ತು.
ಸೂಚನಾ ಫಲಕ ಅಳವಡಿಕೆಗೆ ಒತ್ತಾಯ
ಚಾಲಕರು ಗುಂಡಿ ಇರುವುದು ತಿಳಿಯದೆ ವೇಗವಾಗಿ ಬಂದರೆ ಅಪಾಯಕ್ಕೀಡಾಗುವುದ ಖಚಿತ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸಂಬಂಧಪಟ್ಟವರು ಸೂಚನಾ ಫಲಕ ಅಳವಡಿದಬೇಕು.ರಾತ್ರಿ ಹೊತ್ತಲ್ಲಿ ಮಳೆಯಾಗುತ್ತಿದ್ದರೆ ವಾಹನ ಸಂಚಾಲಕರಿಗೆ ರಸ್ತೆ ಸರಿಯಾಗಿ ಕಾಣಿಸುವುದಿಲ್ಲ. ಸೂಚನಾ ಫಲಕ ಇದ್ದರೆ ಅವರಿಗೆ ಅನುಕೂಲವಾಗುತ್ತದೆ.
ಪರ್ಯಾಯ ಮಾರ್ಗ
ಹೆಬ್ರಿಯಿಂದ ಉಡುಪಿ ಕಡೆ ಹೋಗುವವರು ಹೆಬ್ರಿ-ಸಂತೆಕಟ್ಟೆ -ಬ್ರಹ್ಮಾವರದ ಮೂಲಕ ಪ್ರಯಾಣಿಸಬಹುದು. ತುಸು ದೂರವಾದರೂ ರಸ್ತೆ ಚೆನ್ನಾಗಿದೆ.
ರಸ್ತೆಯಲ್ಲಿ ಹೊಂಡಗುಂಡಿ ಇರುವ ಬಗ್ಗೆ ಮಾಹಿತಿ ಇದೆ. ಮಳೆ ಕಡಿಮೆಯಾದ ತಕ್ಷಣ ಸರಿಪಡಿಸುತ್ತೇವೆ.ಬಹುತೇಕ ಮರ ತೆರವು ಆಗಿದೆ. ಜನವರಿ- ಫೆಬ್ರವರಿ ಒಳಗಾಗಿ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣವಾಗಲಿದೆ. ವಿಪರೀತ ಮಳೆಯಾಗುವುದರಿಂದ ಸ್ವಲ್ಪ ಸಮಸ್ಯೆಯಾಗಿದೆ.
-ಮಂಜುನಾಥ್ ನಾಯ್ಕ
ಜೂನಿಯರ್ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಣಿಪಾಲ
ಈ ರಸ್ತೆಯಲ್ಲಿ ಮಣಿಪಾಲಕ್ಕೆ ಹೋಗಿ ಬರುವುದು ಸಾಹಸವೇ ಸರಿ. ರಸ್ತೆ ಹೊಂಡ ಗುಂಡಿಗಳಿಂದ ಕೂಡಿದೆ. ಆಂಬುಲೆನ್ಸ್ ಸವಾರರ ಪರಿಸ್ಥಿತಿ ಕೇಳುವವರಿಲ್ಲ. ಸೇತುವೆ ನಿರ್ಮಾಣ ಜಾಗದಲ್ಲಿ, ಏರು ತಗ್ಗು ಇದ್ದ ಪ್ರದೇಶಗಳನ್ನು ಜೂನ್ನಲ್ಲಿ ತಾತ್ಕಾಲಿಕವಾಗಿ ಡಾಂಬರೀಕರಣ ಮಾಡಬಹುದಿತ್ತು.
-ನಾಗರಾಜ್, ಕಾರು ಚಾಲಕ