ಬೆಂಗಳೂರು: ಪ್ರಸಿದ್ಧ ಧಾರ್ಮಿಕ ಸ್ಥಳವಾದ ತಿರುಪತಿಗೆ ಹೋಗಬೇಕು ಅಂತ ಈಗ ನೀವೇನಾದರೂ ಅಂದುಕೊಂಡಿದ್ದರೆ ನಿಮ್ಮ ಪ್ರವಾಸವನ್ನು ಸದ್ಯದಮಟ್ಟಿಗೆ ಮುಂದೂಡುವುದೇ ಒಳ್ಳೆಯದು. ಅಲ್ಲಿನ ಪ್ರಸ್ತುತ ಪರಿಸ್ಥಿತಿಯ ದೃಷ್ಟಿಯಿಂದ ಕೆಲಕಾಲ ಕಾದು ಹೋಗುವುದೇ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಏಕೆಂದರೆ ಈಗ ತಿರುಮಲ ತಿರುಪತಿಯಲ್ಲಿ ವಿಪರೀತ ಜನಜಂಗುಳಿ, ಕಾಲಿಡಲಾಗದಷ್ಟು ಜನಸಂದಣಿ. ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಇರುವ ಹಿನ್ನೆಲೆಯಲ್ಲಿ ತಿರುಪತಿ ತಿರುಮಲಕ್ಕೆ ಬರುವ ಜನರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ನಿನ್ನೆ ಮತ್ತು ಇಂದು ವಾರಾಂತ್ಯವಾಗಿದ್ದ ಕಾರಣ, ಜನಸಂದಣಿ ಇನ್ನೂ ಹೆಚ್ಚಾಗಿತ್ತು.
ಈ ಎಲ್ಲ ಹಿನ್ನೆಲೆಯಲ್ಲಿ ಈಗ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಕನಿಷ್ಠ 48 ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಸದ್ಯಕ್ಕೆ ಅಲ್ಲಿಗೆ ಹೋಗುವ ಯೋಚನೆ ಇದ್ದರೆ ಕೆಲಕಾಲ ಬಿಟ್ಟು ತೆರಳುವುದೇ ಸೂಕ್ತ ಎಂದು ಈಗಾಗಲೇ ತಿರುಪತಿಗೆ ಹೋಗಿ ಬಂದಿರುವ ಕೆಲವು ಭಕ್ತರು ಹೇಳುತ್ತಿದ್ದಾರೆ.