ಚೆನ್ನೈ: ಭಾರೀ ಮಳೆಯಿಂದ ತಮಿಳುನಾಡಿನಲ್ಲಿ ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಮಳೆ ಎಡೆ ಬಿಡದೆ ಸುರಿಯುತ್ತಿರುವುದರಿಂದ ಹಲವು ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ರಜೆ ಘೋಷಿಸಿದೆ. ಚೆನ್ನೈನಲ್ಲಿ ರಸ್ತೆಗಳು ಜಲಾವೃತವಾಗಿರುವುದರಿಂದ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಟ್ರಾಫಿಕ್ಜಾಮ್ ಉಂಟಾಗಿದೆ.
ಇದನ್ನೂ ಓದಿ: ಹೊಲದಲ್ಲಿ ಹತ್ತಿ ಕೀಳುತ್ತಿದ್ದಾಗ ಹುಲಿ ದಾಳಿ: ಮಹಿಳೆ ಮೃತ್ಯು..ಎಲ್ಲಿ?
ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ 8 ಗಂಟೆಯವರೆಗೆ ಸುರಿದ ಭಾರಿ ಮಳೆಗೆ ಚೆನ್ನೈ ಸೇರಿದಂತೆ ಇತರ ನಗರ ಪ್ರದೇಶಗಳಲ್ಲಿ ಪ್ರಮುಖ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮತ್ತೊಂದೆಡೆ, ಮಳೆ ಇನ್ನೂ ಒಂದು ವಾರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆಯಿಂದಾಗಿ ರಾಜಧಾನಿ ಚೆನ್ನೈನಲ್ಲಿ ವಾಹನ ಸಂಚಾರ ತೀವ್ರ ಅಸ್ತವ್ಯಸ್ತಗೊಂಡಿದೆ. ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಚೆಂಗಲ್ಪಟ್ಟು, ನಾಗಪಟ್ಟಣಂ, ವಿಲ್ಲುಪುರಂ, ಕಡಲೂರು, ಕಲ್ಲಕುರ್ಚಿ, ರಾಣಿಪೆ, ವೆಲ್ಲೂರು ಮತ್ತು ತಿರುವಣ್ಣಾಮಲೈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಮಳೆಯಿಂದಾಗಿ ನಾಗಪಟ್ಟಣಂ, ವಿಲ್ಲುಪುರಂ, ತಿರುವಳ್ಳೂರು ಮತ್ತು ಕಡಲೂರು ಜಿಲ್ಲೆಗಳ ಎರಡು ತಾಲೂಕುಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.
ಮತ್ತೊಂದೆಡೆ ಈ ವಾರ ಪೂರ್ತಿ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ಮೈಲಾಡುದುರೈ, ನಾಗಪಟ್ಟಿಣಂ, ತಿರುವಾಯೂರು ಜಿಲ್ಲೆಗಳು, ಪುದುಚೇರಿ ಮತ್ತು ಕಾರೈಕ್ಕಲ್ ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ.
ಕೋಲಾರದಲ್ಲಿ ಮಳೆ: ತಮಿಳುನಾಡಿನಲ್ಲಿ ಮಳೆಯಾಗುತ್ತಿರುವುದರಿಂದ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುತ್ತಿದೆ. ಕೋಲಾರ ಜಿಲ್ಲೆಯ ಮಾಲೂರು, ಬಂಗಾರಪೇಟೆ, ಕೋಲಾರ, ಮುಳಬಾಗಿಲು ಮತ್ತು ಕೆಜಿಎಫ್ ತಾಲೂಕುಗಳಲ್ಲಿ ಸೋಮವಾರ ಮುಂಜಾನೆ ಮಳೆಯಾದ ಬಗ್ಗೆ ವರದಿಯಾಗಿದೆ.