ಹೊಸಪೇಟೆ: ಮಂಗಳವಾರ ಬೆಳ್ಳಂಬೆಳಗ್ಗೆ ಸುರಿದ ಭಾರೀ ಮಳೆಗೆ ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಗೆ ಜಲ ದಿಗ್ಬಂಧನ ಉಂಟಾಗಿದೆ. ಕಚೇರಿ ಬಾಗಿಲು ತೆರೆಯದೇ ಸಿಬ್ಬಂದಿ ರಸ್ತೆಯಲ್ಲೇ ಕಾದು ನಿಂತಿದ್ದಾರೆ.
ಬೆಳಗ್ಗೆ ೫.೩೦ರ ಸುಮಾರಿಗೆ ಆರಂಭಗೊಂಡ ಮಳೆ, ಸುಮಾರು ಎರಡೂವರೆ ಗಂಟೆಗಳ ಕಾಲ ಅಬ್ಬರಿಸಿದೆ.
ಹುಡಾ ಕಚೇರಿ ಪಕ್ಕದ ರಾಜಕಾಲುವೆಯಲ್ಲಿ ಹೂಳು, ತ್ಯಾಜ್ಯ ತುಂಬಿದ್ದರಿಂದ ನೀರು ಸರಾಗವಾಗಿ ಹರಿಯಲಾಗದೇ, ಹುಡಾ ಕಚೇರಿ ಸೇರಿದಂತೆ ಸುತ್ತಮುತ್ತಲಿನ ಮನೆಗಳಿಗೂ ನೀರು ನುಗ್ಗಿದೆ.
ನೀರು ಹಿಮ್ಮುಖವಾಗಿ ಚಲಿಸಿದ್ದರಿಂದ ಹುಡಾ ಕಚೇರಿ ಸಂಪೂರ್ಣ ಜಲಾವೃತಗೊಂಡಿದೆ.
ಕಚೇರಿ ಆವರಣದಲ್ಲಿ ಮೊಣಕಾಲಿನ ಮಟ್ಟಕ್ಕೆ ನೀರು ನಿಂತಿದ್ದರಿಂದ ಕಚೇರಿ ಬಾಗಿಲು ತೆಗೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಚೇರಿ ಆವರಣದಲ್ಲಿ ನೀರು ಕಡಿಮೆಯಾಗಲಿ ಎಂದು ಕಾದಿದ್ದಾರೆ.
ಹುಡಾ ಕಚೇರಿ ಸಂಕೀರ್ಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಲೋಕಾಯುಕ್ತ ಪೊಲೀಸ್ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಎಂದಿನಂತೆ ಬೆಳಗ್ಗೆಯೇ ಕಚೇರಿಗೆ ಆಗಮಿಸಿರುವ ಮೂರೂ ಇಲಾಖೆಗಳ ೫೦ಕ್ಕೂ ಹೆಚ್ಚು ಸಿಬ್ಬಂದಿ ಪಕ್ಕದ ರಿಂಗ್ ರೋಡ್ನಲ್ಲಿ ಮರದ ನೆರಳಲ್ಲಿ ಕಾದು ನಿಂತಿದ್ದಾರೆ. ಮತ್ತೊಂದೆಡೆ ನಗರಸಭೆ ಪೌರಕಾರ್ಮಿಕರು ಚರಂಡಿಗಳ ಸ್ವಚ್ಛತೆಯಲ್ಲಿ ತೊಡಗಿದ್ದು, ನೀರು ಕಡಿಮೆಯಾದ ಬಳಿಕ ಕಚೇರಿ ಬಾಗಿಲು ತೆರಯಲಿವೆ.
ಅಲ್ಪ ಮಳೆಗೆ ಹುಡಾ ಕಚೇರಿಯ ಪರಿಸ್ಥಿತಿಯೇ ಹೀಗಾದರೆ, ನಗರಾಭಿವೃದ್ಧಿ ಇನ್ನೆಲ್ಲಿ ಎಂದು ಸಾರ್ವಜನಿಕರು ಹಾಡಿಕೊಳ್ಳುವಂತಾಗಿದೆ.