ಮಂಗಳೂರು: ನಗರದ ಹೊರ ವಲಯದ ತೋಟಬೆಂಗ್ರೆಯಲ್ಲಿ ಗುರುವಾರ ಸುರಿದ ಭಾರಿ ಮಳೆಗೆ 80ಕ್ಕೂ ಅಧಿಕ ಮನೆಗಳು ಜಲಾವೃತವಾಗಿವೆ. 12 ಮನೆಗಳ ಒಳಗೆ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳಿಗೆ ಹಾನಿ ಉಂಟಾಗಿದೆ. ಸುಮಾರು 80 ಮಂದಿಯನ್ನು ಬೆಂಗ್ರೆ ಮಹಾಜನಾ ಸಭಾದ ಕಟ್ಟಡದಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಮನೆಗಳ ಸುತ್ತ ಸುಮಾರು 4 ಅಡಿಗಳಷ್ಟು ನೀರು ನಿಂತಿದ್ದು, ನಿರಂತರ ಮಳೆಯಾಗುತ್ತಿರುವುದರಿಂದ ನೀರಿನ ಮಟ್ಟ ಕಡಿಮೆಯಾಗುತ್ತಿಲ್ಲ. ಮಳೆ ಸಂಪೂರ್ಣ ಕಡಿಮೆಯಾದರೆ ಮೂರ್ನಾಲ್ಕು ತಾಸುಗಳಲ್ಲಿ ನೀರು ಹರಿದು ಹೋಗಬಹುದು ಎಂದು ಇಲ್ಲಿನ ನಿವಾಸಿ ಲೋಕೇಶ್ ಬೆಂಗ್ರೆ ತಿಳಿಸಿದ್ದಾರೆ.
ಕೂಳೂರು, ಕೊಟ್ಟಾರ ಪರಿಸರದಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಫಲ್ಗುಣಿ ನದಿಯ ಬದಿಯಲ್ಲಿರುವ ಮನೆಗಳ ತನಕ ನೀರು ಬಂದು ಜಲಾವೃತಗೊಂಡಿದೆ. ಮನೆಯಿಂದ ಹೊರಗೆ ಹೋಗಲು ಸಾಧ್ಯವಿಲ್ಲದಂತಾಗಿದೆ. ಕೆಲವು ಕಡೆ ರಬ್ಬರ್ ಬೋಟ್ಗಳ ಮೂಲಕ ಸಂಚರಿಸಿದರು. ಯುವಕರು ನೀರಿನಲ್ಲಿ ಆಟವಾಡುತ್ತಿದ್ದ ದೃಶ್ಯ ಕಂಡು ಬಂತು.
ಅದ್ಯಪಾಡಿ ಭಾಗದಲ್ಲಿ ಫಲ್ಗುಣಿ ನದಿ ತುಂಬಿ ಹರಿದ ಪರಿಣಾಮ ಇಲ್ಲಿನ ತಗ್ಗು ಪ್ರದೇಶಗಳಿಗೆ ನೆರೆ ಬಂದಿದೆ. ಸ್ಥಳೀಯರು ಸಂಚಾರಕ್ಕೆ ಬೋಟ್ಗಳನ್ನು ಬಳಸಿದರು. ಇಲ್ಲಿನ ಮನೆಗಳಿಗೆ, ದನದ ಹಟ್ಟಿಗಳಿಗೆ ನೀರು ಬಂದಿದೆ. ಇಲ್ಲಿ ಪ್ರತಿ ವರ್ಷವೂ ನೆರೆ ಸಾಮಾನ್ಯ. ಈ ಭಾಗದಲ್ಲಿ ಕೆಲವು ಕಡೆ ಬರೆ ಕುಸಿತವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.