ಉತ್ತರಕನ್ನಡ/ಹಾಸನ: ಮಹಾಮಾರಿ ಕರೊನಾ ಹೊಡೆತದ ನಡುವೆ ರಾಜ್ಯಕ್ಕೆ ವರುಣಾಘಾತ ಎದುರಾಗಿದ್ದು, ಜನರಲ್ಲಿ ಪ್ರವಾಹದ ಆತಂಕದ ಕಾರ್ಮೋಡ ಕವಿದಿದೆ. ಹಲವಡೆ ಮಳೆರಾಯ ಅಬ್ಬರಕ್ಕೆ ಭೂಕುಸಿತಗಳಾಗಿದ್ದು, ಹಳ್ಳ-ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಿದ್ದು, ಶವಗಳು ಪತ್ತೆಯಾಗುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಬುಧವಾರವಷ್ಟೇ ಉತ್ತರಕನ್ನಡದ ಹೊನ್ನಾವರ ಮೂಲದ ಸಂತೋಷ್ ನಾಯ್ಕ್ (30) ಬೈಕ್ ಸಮೇತ ನೀರಲ್ಲಿ ಕೊಚ್ಚಿ ಹೋಗಿದ್ದರು. ಇದೀಗ ಗುಳ್ಳಾಪುರ ಸೇತುವೆ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಅಂಕೋಲಾ ಹಾಗೂ ಯಲ್ಲಾಪುರ ಸಂಪರ್ಕಿಸುವ ಸುಂಕಸಾಳ ಹೆದ್ದಾರಿಯಲ್ಲಿ ನಿನ್ನೆ ಪ್ರವಾಹದ ನೀರು ತುಂಬಿತ್ತು. ಈ ವೇಳೆ ಬೈಕ್ ಮೂಲಕ ರಸ್ತೆ ದಾಟುವಾಗ ಸಂತೋಷ್ ಆಯತಪ್ಪಿ ಬಿದ್ದಿದ್ದ. ನೀರಿನ ಸೆಳೆತಕ್ಕೆ ಬೈಕ್ ಸಮೇತ ಕೊಚ್ಚಿ ಹೋಗಿದ್ದ. ಇಂದು ಗುಳ್ಳಾಪುರ ಸೇತುವೆ ಬಳಿ ಶವ ಪತ್ತೆಯಾಗಿದ್ದಾರೆ.
ಇದನ್ನೂ ಓದಿ: ರಾಮಮಂದಿರ ಶಿಲಾನ್ಯಾಸ ಹಿಂದುಗಳಿಗೆ ಐತಿಹಾಸಿಕ ದಿನ ಎಂದ ಪಾಕ್ ಮಾಜಿ ಕ್ರಿಕೆಟಿಗ ಕನೇರಿಯಾ
ಹಾಸನದಲ್ಲೂ ಶವ ಪತ್ತೆ
ಹಾಸನದಲ್ಲಿ ಸುರಿಯುತ್ತಿರುವ ಭಾರಿ ಗಾಳಿ-ಮಳೆ ಸಕಲೇಶಪುರ ತಾಲೂಕಿನಲ್ಲಿ ಒಬ್ಬರನ್ನು ಬಲಿ ಪಡೆದಿದ್ದರೆ, ಹಲವರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಉಕ್ಕಿ ಹರಿಯುತ್ತಿದ್ದ ಎತ್ತಿನಹೊಳೆ ದಾಟುತ್ತಿದ್ದ ಸಂಕ್ಲಾಪುರ ಮಠ ಗ್ರಾಮದ ಸಿದ್ದಯ್ಯ (65) ನದಿ ನೀರಿನಲ್ಲಿ ಕೊಚ್ಚಿಹೋಗಿದ್ದರು. ಬುಧವಾರ ಸಂಜೆ ಜಾನುವಾರುಗಳನ್ನು ಮನೆಗೆ ತರುವ ವೇಳೆ ಘಟನೆ ನಡೆದಿತ್ತು. ನಿರಂತರ ಹುಡುಕಾಟದ ನಂತರ ಗುರುವಾರ ಮೃತದೇಹ ಪತ್ತೆಯಾಗಿದೆ.
ಮೈಸೂರಿನಲ್ಲಿ ಮಳೆಗೆ ಬಲಿ
ಮೈಸೂರು ಜಿಲ್ಲೆಯಲ್ಲಿ ಮಳೆಗೆ ಎರಡನೇ ಬಲಿಯಾಗಿದೆ. ಮಳೆಗೆ ಮನೆಗೋಡೆ ಕುಸಿದು ವೃದ್ದ ಶಿವನಂಜಯ್ಯ (80) ಎಂಬುವರು ಮೃತಪಟ್ಟಿದ್ದಾರೆ. ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಗೋಡೆ ಕುಸಿದಿದೆ. ಎಚ್.ಡಿ.ಕೋಟೆ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಬೈರುತ್ ಸ್ಫೋಟ: 30 ಗಂಟೆ ಬಳಿಕ ಬಂದರು ಕಾರ್ಮಿಕ ರಕ್ತಸಿಕ್ತ ಸ್ಥಿತಿಯಲ್ಲಿ ಜೀವಂತ ಪತ್ತೆ!
ಒಟ್ಟಾರೆ, ಕರೊನಾ ನಡುವೆ ರಾಜ್ಯಾದ್ಯಂತ ಅಬ್ಬರಿಸುತ್ತಿರುವ ಮಳೆಯಿಂದಾಗಿ ಜನ-ಜೀವನ ಅಸ್ತವ್ಯಸ್ತವಾಗುವ ಆತಂಕ ಎದುರಾಗಿದೆ. ಕಳೆದ ವರ್ಷದ ಭೀಕರ ಪ್ರವಾಹದಿಂದಲೇ ರಾಜ್ಯದ ಜನ ಇನ್ನೂ ಚೇತರಿಸಿಕೊಂಡಿಲ್ಲ. ಇದರ ಬೆನ್ನಲ್ಲೇ ಗಾಯದ ಮೇಲೆ ಬರೆ ಎಂಬಂತೆ ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. (ದಿಗ್ವಿಜಯ ನ್ಯೂಸ್)
ಅತ್ಯಾಚಾರಕ್ಕೊಳಗಾಗಿ, ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಬಾಲಕಿಗೆ ಸಿಎಂ ಭೇಟಿ