ಚಾಮರಾಜನಗರ: ಎದೆ ನೋವು ಕಾಣಿಸಿಕೊಂಡ ಕಾರಣ ವ್ಯಕ್ತಿ ಓರ್ವನನ್ನು ಆಸ್ಪತ್ರಗೆ ಕರೆದುಕೊಂಡು ಹೋದಾಗ ವೈದ್ಯರು ಹಾರ್ಟ್ ಅಟ್ಯಾಕ್ನಿಂದ ಮೃತಪಟ್ಟಿರುವುದಾಗಿ ತಿಳಿಸಿದ್ಧಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುವ ವೇಳೆ ವ್ಯಕ್ತಿ ಜೀವಂತ ಇರುವುದು ಬೆಳಕಲಿಗೆ ಬಂದಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ ನಡೆದಿದೆ.
ಹನೂರಿನ ವಿವೇಕಾನಂದ ಶಾಲೆಯಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ತರಬೇತಿಯಲ್ಲಿದ್ದ ನೌಕರ ಜಗದೀಶ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ಧಾರೆ.
ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು
ಕರ್ನಾಟಕ ರಾಜ್ಯ ಖಜಾನೆ(Treasury) ಹನೂರು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜಗದೀಶ್ ಅವರನ್ನು ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಳಿಸಲಾಗಿತ್ತು.
ಮಂಗಳವಾರ ಬೆಳಗ್ಗೆ ವಿವೇಕಾನಂದ ಶಾಲೆಗೆ ತರಬೇತಿಗೆಂದು ಬಂದಿದ್ದ ಜಗದೀಶ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಕುಸಿದು ಬಿದ್ದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದವರು ಅವರನ್ನು ಕಾಮಗೆರೆ ಬಳಿ ಇರುವ ಹೋಲಿ ಕ್ರಾಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಜಗದೀಶ್ ಅವರನ್ನು ಪರೀಕ್ಷೆ ಮಾಡಿದ ವೈದ್ಯರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ಧಾರೆ ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ನಿಸ್ತೇಜವಾಗಿ ಮಲಗಿದ್ದ ಜಗದೀಶ್ ಅವರನ್ನು ನೋಡಿದ್ದರಲ್ಲದೆ, ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಯಿಂದ ಘಟನೆಯ ಬಗ್ಗೆ ಅಧಿಕಾರಿಗಳಿಂ ಮಾಹಿತಿಯನ್ನು ಪಡೆದಿದ್ದಾರೆ.
ಇದನ್ನೂ ಓದಿ: RCB vs CSK ಪಂದ್ಯದ ವೇಳೆ ನಿಯಮ ಉಲ್ಲಂಘನೆ; ವಿರಾಟ್ ಕೊಹ್ಲಿಗೆ ದಂಡ
ಕೈ-ಕಾಲು ಆಡಿಸಿದ ಜಗದೀಶ್
ಜಗದೀಶ್ ಮೃತಪಟ್ಟಿದ್ದಾರೆ ಎಂದು ತಿಳಿದು ಅವರ ಪಾರ್ಥೀವ ಶರೀರವನ್ನು ಹನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಇನ್ನೇನು ಪರೀಕ್ಷೆಗೆಂದು ಕೊಠಡಿಗೆ ಶವವನ್ನು ತೆಗೆದುಕೊಂಡು ಹೋಗುವಾಗ ಜಗದೀಶ್ ಕೈ-ಕಾಲು ಆಡಿಸಿದ್ದಾರೆ.
ಜಗದೀಶ್ ಕೈ-ಕಾಲು ಆಡಿಸಿದ್ದನ್ನು ಗಮನಿಸಿದ ಸಾರ್ವಜನಿಕರು ಹಾಗೂ ಕುಟುಂಬಸ್ಥರು ಕೂಡಲೇ ವೈದ್ಯರಿಗೆ ತಿಳಿಸಿದ್ದಾರೆ. ನಂತರ ಪರೀಕ್ಷೆ ನಡೆಸಿದ ಮೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಜಗದೀಶ್ ಅವರನ್ನು ಮೈಸೂರಿಗೆ ಕಳುಹಿಸಿದ್ಧಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್ವ್ಯಕ್ತಿ ಮೆಟ್ಟಿಲು ಹತ್ತುವಾಗ ಕೆಳಗೆ ಬಿದ್ದಿದ್ದಾರೆ. ಗಲ್ಲ ಮತ್ತು ತಲೆಯಲ್ಲಿ ತೀವ್ರ ರಕ್ತ ಬಂದಿದ್ದರಿಂದ ಗಾಬರಿಯಾಗಿ ಕೋಮಾ ಸ್ಥಿತಿಗೆ ಮರಳಿರುವ ಸಾಧ್ಯತೆ ಇದೆ. ಮಧ್ಯಾಹ್ನದವರೆಗೂ ವ್ಯಕ್ತಿಗೆ ಪ್ರಜ್ಞೆ ಬಂದಿರಲಿಲ್ಲ. ನಾನು ಮರಣೋತ್ತರ ಪರೀಕ್ಷೆ ಮಾಡಲು ಹೋದಾಗ ನಾಡಿಮಿಡಿತ ಪರೀಕ್ಷಿಸಿದಾಗ ಬದುಕಿರುವುದು ಗೊತ್ತಾಗಿದೆ. ಕೂಡಲೇ ಅವರನ್ನು ಬೇರೆ ಆಸ್ಪತ್ರೆಗೆ ರವಾನಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ಧಾರೆ.
ಆಸ್ಪತ್ರೆ ವಿರುದ್ಧ ಆಕ್ರೋಶ
ಬದುಕಿದ್ದ ವ್ಯಕ್ತಿಯನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ಆಸ್ಪತ್ರೆ ವಿರುದ್ಧ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಕಿಡಿಕಾರಿದ್ದು ಒಬ್ಬ ವ್ಯಕ್ತಿಯ ಪ್ರಾಣದ ಜೊತೆ ಚೆಲ್ಲಾಟವಾಡಿದ್ದಾರೆ ಎಂದು ಹಿಡಿ ಹಿಡಿ ಶಾಪ ಹಾಕಿದ್ದಾರೆ.