ಮಂಡ್ಯ: ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಮಾಡುವುದು ಬೇಡ. ಸರಿಯಾದ ಆಹಾರ ಪದ್ಧತಿಯ ಜತೆಗೆ ನಿತ್ಯವೂ ವ್ಯಾಯಾಮದ ಮೂಲಕ ಆರೋಗ್ಯವಂತರಾಗಿರಬೇಕು ಎಂದು ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಸಲಹೆ ನೀಡಿದರು.
ನಗರದ ನಿವೃತ್ತ ಪೊಲೀಸ್ ನೌಕರರ ಸಂಘದ ಆವರಣದಲ್ಲಿ ವಾತ್ಸಲ್ಯ ಟ್ರಸ್ಟ್ ಹಾಗೂ ಹಿಮ ಡಯಾಗ್ನೋಸ್ಟಿಕ್ ಸೆಂಟರ್ ವತಿಯಿಂದ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನಮಾನಗಳಲ್ಲಿ ಆರೋಗ್ಯವೇ ದೊಡ್ಡ ಭಾಗ್ಯವಾಗಿದೆ. ಜೀವನದಲ್ಲಿ ಎಷ್ಟು ಕೆಲಸ ಮಾಡುತ್ತಿವೋ ಅದೇ ರೀತಿ ಆರೋಗ್ಯವಂತರಾಗಿರುವುದು ಮುಖ್ಯ. ನಿವೃತ್ತ ಅಧಿಕಾರಿಗಳು ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಬಹಳಷ್ಟು ಜನ ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಆದ್ದರಿಂದ ಆಹಾರ ಪದ್ಧತಿಗಳು ಮತ್ತು ವೈದ್ಯಾಧಿಕಾರಿಗಳ ಸಲಹೆಯಂತೆ ಜೀವನವನ್ನು ನಡೆಸಬೇಕೆಂದು ಹೇಳಿದರು.
ಮಧುಮೇಹ ಮತ್ತು ಹೃದಯ ಸಂಬಂಧಿ ತಜ್ಞ ಡಾ.ಶ್ರೀನಿವಾಸ್ಮೂರ್ತಿ ಮಾತನಾಡಿ, ಸಕ್ಕರೆಕಾಯಿಲೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಶಾಶ್ವತ ಪರಿಹಾರಗಳಿವೆ. ಆದರೆ ನಾವು ಆಹಾರ ಪದ್ಧತಿಗಳಲ್ಲಿ ಹೆಚ್ಚು ಕ್ರಮ ಕೈಗೊಳ್ಳಬೇಕು. ಸಕ್ಕರೆ ಮತ್ತು ಎಣ್ಣೆಯಿಂದ ಕರಿಯುವ ಆಹಾರಗಳನ್ನು ಸೇವಿಸದೆ, ಸಾವಯವ ಆಹಾರ ಪದ್ಧತಿಗಳನ್ನು ಹೆಚ್ಚು ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಡಾ.ಯೋಗೇಂದ್ರ, ಡಾ.ಹರೀಶ್, ನಿವೃತ್ತ ಪೊಲೀಸ್ ನೌಕರರ ಸಂಘದ ಅಧ್ಯಕ್ಷ ಮಂಚೇಗೌಡ ಇತರರಿದ್ದರು.