ಲಖನೌ: ಶಾಲಾ ಕಟ್ಟಡಕ್ಕೆ ಪೇಟಿಂಗ್ ಮಾಡಿಸಿದ್ದರಿಂದ ಗ್ರಾಮಸ್ಥರು ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಏನಿದು ಶಾಲೆಗೆ ಪೇಟಿಂಗ್ ಮಾಡಿಸಿದ್ದು ತಪ್ಪಾ ಎಂದು ನೀವು ಕೇಳಬಹುದು. ಹೌದು ಇದಕ್ಕೂ ಕಾರಣವಿದೆ.
ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡಕ್ಕೆ ಹಸಿರು ಬಣ್ಣವನ್ನು ಹಚ್ಚಿರುವುದಕ್ಕೆ ಗ್ರಾಮಸ್ಥರು ಶಾಲೆಯ ಮುಖ್ಯ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬರೀ ಹಸಿರುಬಣ್ಣ ಬಳಿದು ಮದರಸ ರೀತಿ ಮಾಡಿದ್ದಾರೆ. ಕೂಡಲೇ ಈ ಬಣ್ಣ ತೆಗೆಯಬೇಕೆಂದು ಸೂಚಿಸಿದ್ದಾರೆ. ಇನ್ನು ಶಾಲೆಗೆ ಬಿಳಿ ಬಣ್ಣವನ್ನೇ ಬಳಿಯಬೇಕೆಂದು ಒತ್ತಾಯ ಕೂಡ ಮಾಡಿದ್ದಾರೆ.
ಶಾಲಾ ಮುಖ್ಯ ಶಿಕ್ಷಕ ಬ್ರಜೇಶ್ ಗೌತಮ್ ಎಂಬುವರು ಶಾಲಾ ಕಟ್ಟಡಕ್ಕೆ ಇತ್ತೀಚೆಗೆ ಪೇಂಟಿಂಗ್ ಮಾಡಿಸಿದ್ದಾರೆ. ಆದರೆ ಗ್ರಾಮಸ್ಥರಿಗೆ ಇದು ಕಸಿವಿಸಿಯಾಗಿದೆ. ಶಾಲಾ ಕಟ್ಟಡ ನೋಡಿದರೆ ಯಾವುದೋ ಮದರಸದಂತೆ ಭಾಸವಾಗುತ್ತಿದೆ ಎಂದು ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ. ಸದ್ಯ ಈ ಬಣ್ಣ ತೆಗೆಯುವುದಾಗಿ ಭರವಸೆ ನೀಡಿದ್ದಾರೆ.
ಇನ್ನು ಉತ್ತರ ಪ್ರದೇಶದ ಸರ್ಕಾರಿ ಪ್ರಾಥಮಿಕ ಶಾಲೆಗಳ ಕಟ್ಟಡಕ್ಕೆ ಬಿಳಿ ಮತ್ತು ಕೆಂಪು ಬಣ್ಣದ ಬಣ್ಣವನ್ನು ಹಚ್ಚಲು ಅನುಮತಿ ಇದೆ. ಆದರೆ ಈ ಶಿಕ್ಷಕನ ನಡೆಯಿಂದಾಗಿ ಅನುಮಾನ ವ್ಯಕ್ತವಾಗಿದ್ದು, ಕೂಡಲೇ ಈತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.