ಕಡೂರು: ಪ್ರಪಂಚವನ್ನೇ ನಿಯಂತ್ರಿಸುವ ಶಕ್ತಿಯಿರುವ ಮನುಷ್ಯನಿಗೆ ಅವರ ದೌರ್ಬಲ್ಯ ನಿಯಂತ್ರಿಸಿಕೊಳ್ಳಲು ಸಾಧ್ಯವಾಗದಿರುವುದು ವಿಪರ್ಯಾಸ. ದೌರ್ಬಲ್ಯಗಳ ಮೇಲೆ ಹಿಡಿತ ಸಾಧಿಸುವವನು ಜೀವನದಲ್ಲಿ ಯಶಸ್ವಿಯಾಗುತ್ತಾನೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ತಿಳಿಸಿದರು.
ಕೆ.ಹೊಸಳ್ಳಿಯಲ್ಲಿ ಮಂಗಳವಾರ ಏರ್ಪಡಿಸಿದ್ದ 1686ನೇ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿ, ಮದ್ಯ ಸೇವನೆಯಿಂದಲೇ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಮದ್ಯವರ್ಜನ ಶಿಬಿರದಲ್ಲಿ ವ್ಯಸನ ಬಿಡಿಸಲು ಯಾವುದೆ ಚಿಕಿತ್ಸೆ ಅಥವಾ ಔಷಧ ನೀಡುವುದಿಲ್ಲ. ಬದಲಾಗಿ ಮನಸ್ಸನ್ನು ಪರಿವರ್ತನೆ ಮಾಡುವ ಮೂಲಕ ಉತ್ತಮ ಪ್ರಜೆಯನ್ನಾಗಿ ರೂಪಿಸಲಾಗುತ್ತದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎರಡನೇ ಸರ್ಕಾರದಂತೆ ಕೆಲಸ ಮಾಡುತ್ತಿದೆ. ಸಮಾಜದ ದೋಷ ಹೋಗಲಾಡಿಸಿ ಆರ್ಥಿಕ ಮತ್ತು ಸಾಮಾಜಿಕವಾಗಿ ಬಲಿಷ್ಠಗೊಳಿಸಲು ಶ್ರಮಿಸುತ್ತಿದೆ. ಕುಟುಂಬಗಳ ನೆಮ್ಮದಿಯ ಜೀವನ ಮತ್ತು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಮದ್ಯವ್ಯಸನದಿಂದ ದೂರವಿರಬೇಕಿದೆ. ಕುಟುಂಬದ ಆದಾಯ ಹೆಚ್ಚಿಸಿಕೊಳ್ಳಲು ದುಶ್ಚಟಗಳಿಂದ ಹೊರಬಂದು ಆದರ್ಶ ಜೀವನ ನಡೆಸುವಂತಾಗಬೇಕಿದೆ ಎಂದು ತಿಳಿಸಿದರು.