ನವದೆಹಲಿ: ನಿಜವಾದ ಅಯೋಧ್ಯೆ ಇರುವುದು ಭಾರತದಲ್ಲಿ ಅಲ್ಲ, ನೇಪಾಳದಲ್ಲಿ. ಶ್ರೀರಾಮ ಭಾರತೀಯನಲ್ಲ..ಅವನು ನೇಪಾಳಿ ಎಂದು ಹೇಳಿದ್ದ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರ ವಿರುದ್ಧ ಶಿವಸೇನೆ ಸಿಡಿದೆದ್ದಿದೆ. ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಸಂಪಾದಕೀಯ ಬರೆಯಲಾಗಿದೆ.
ಶ್ರೀರಾಮ ಇಡೀ ವಿಶ್ವಕ್ಕೇ ಸೇರಿದವನು. ಈ ಪ್ರಪಂಚವೇ ಅವನದು. ಆದರೆ ಶ್ರೀರಾಮ ಹುಟ್ಟಿದ ಸ್ಥಳ ಅಯೋಧ್ಯೆ ಇರುವುದು ಭಾರತದಲ್ಲಿ ಮಾತ್ರ ಎಂದು ಹೇಳಿದೆ. ನೇಪಾಳ ಪ್ರಧಾನಿ ಓಲಿ ಹೀಗೆ ಬಿಟ್ಟರೆ ಮೊಘಲ್ ದೊರೆ ಬಾಬರ್ ಕೂಡ ನೇಪಾಳದವನನು ಎನ್ನುತ್ತಾರೆ ಎಂದು ಶಿವಸೇನೆ ವ್ಯಂಗ್ಯವಾಡಿದೆ.
ನೇಪಾಳದ ಪ್ರಧಾನಿ ಚೀನಾದ ಕೈಗೊಂಬೆಯಾಗಿದ್ದಾರೆ. ಡ್ರ್ಯಾಗನ್ಗೆ ಹತ್ತಿರವಾದ ಆ ದೇಶ ತನ್ನ ಧರ್ಮ, ಸಂಸ್ಕೃತಿ, ಭಾರತದೊಂದಿಗಿನ ಒಪ್ಪಂದಗಳನ್ನೆಲ್ಲ ಮರೆತಿದೆ. ನೇಪಾಳ, ಹಿಂದು ಸಂಸ್ಕೃತಿಯನ್ನೆಲ್ಲ ಚೀನಾ ಎದುರು ಓಲಿ ಶರಣಾಗಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇವತ್ತೇನಾದರೂ ಶ್ರೀರಾಮ ನೇಪಾಳದಲ್ಲಿ ಇದ್ದಿದ್ದರೆ, ಅಂದು ರಾವಣನನ್ನು ಕೊಂದು, ಪಾಪ ನಾಶ ಮಾಡಿದಂತೆ ಇಂದು ಹಿಂದುದ್ರೋಹಿ ಓಲಿಯನ್ನೂ ಶಿಕ್ಷಿಸುತ್ತಿದ್ದ ಎಂದು ಹೇಳಿದೆ.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ನೇಪಾಳ ಪ್ರಧಾನಿ, ಶ್ರೀರಾಮ ಹುಟ್ಟಿದ್ದು ದಕ್ಷಿಣ ನೇಪಾಳದ ಥೋರಿಯಲ್ಲಿ. ನಿಜವಾದ ಅಯೋಧ್ಯೆ ಇರುವುದು ನೇಪಾಳದಲ್ಲಿ ಎಂದು ಹೇಳಿದ್ದರು. ಅವರದ್ದೇ ದೇಶದ ಹಲವು ಪ್ರಮುಖ ರಾಜಕೀಯ ಮುಖಂಡರು ಓಲಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿ, ಟೀಕಿಸಿದ್ದವು. ಹೇಳಿಕೆಯನ್ನು ವಾಪಸ್ ಪಡೆಯಿರಿ ಎಂದು ಆಗ್ರಹಿಸಿದ್ದವು.
ಅಷ್ಟೇ ಅಲ್ಲ, ಓಲಿ ವಿರುದ್ಧ ಮುಸ್ಲಿಂ ಮುಖಂಡರೂ ಹರಿಹಾಯ್ದಿದ್ದಾರೆ. ಬಾಬ್ರಿ ಮಸೀದಿ ಪರ ಕಕ್ಷಿದಾರರಾಗಿದ್ದ ಮುಖಂಡ ಇಕ್ಬಾಲ್ ಅನ್ಸಾರಿ ಅವರು ಪ್ರಧಾನಿ ಓಲಿ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಈ ವಿಚಾರವಾಗಿ ಆಂಜನೇಯ ಸ್ವಾಮಿ ಏನಾದರೂ ಸಿಟ್ಟಾದರೆ, ಇಡೀ ನೇಪಾಳವನ್ನು ನಾಶ ಮಾಡುತ್ತಾನೆ. ಯಾಕೆಂದರೆ ರಾಮ ಎಲ್ಲಿ ಹೋಗುತ್ತಾನೋ..ಅವನ ಹಿಂದೆ ಹನುಮನೂ ಹೋಗುತ್ತಾನೆ. ರಾಮನಿದ್ದಲ್ಲಿ…ಹನುಮ ಎಂದು ಹೇಳಿದ್ದಾರೆ.
ಹಾಗೇ, ಅಯೋಧ್ಯೆಯ ಮಹತ್ವವೇ ನೇಪಾಳ ಪ್ರಧಾನಮಂತ್ರಿಗೆ ಗೊತ್ತಿಲ್ಲ ಎಂದು ಇಕ್ಬಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
ಪರೀಕ್ಷೆಯಲ್ಲದೇ ಸಿಕ್ತು ‘ಪಾಸ್’ ಮಾರ್ಕ್ಸ್ಕಾರ್ಡ್- ತನಿಖೆಗೆ ವಿದ್ಯಾರ್ಥಿಗಳು ಸುಸ್ತು