ಬೆಂಗಳೂರು: ನಿನ್ನೆಯಷ್ಟೇ ಐಪಿಎಸ್ ಅಧಿಕಾರಿ ಡಿ ರೂಪಾ ರೋಹಿಣಿ ಸಿಂಧೂರಿ ಮೇಲೆ ಬರೋಬ್ಬರಿ 19 ಪ್ರಶ್ನೆಗಳನ್ನು ಕೇಳಿದ್ದು ನಂತರ ಒಂದಷ್ಟು ಫೋಟೊಗಳನ್ನೂ ಹಂಚಿಕೊಂಡಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು. ಅದರಲ್ಲಿ ಡಿ ರೂಪಾ ಮೇಲೆ ವೈಯಕ್ತಿಕ ಆರೋಪಗಳನ್ನೂ ಮಾಡಿದ್ದು ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದರು. ಇದೀಗ ಅಧಿಕಾರಿಗಳ ಸಮರದಲ್ಲಿ ಅಭಿಮಾನಿಗಳೂ ಇಳಿದಿದ್ದು ಇಂದು ಬೆಳಗ್ಗೆ ಸಿಂಧೂರಿ ಆರ್ಗನೈಸೇಶನ್ ಎಂಬ ಫೇಸ್ಬುಕ್ ಖಾತೆಯಿಂದ ಡಿ ರೂಪಾ ಐಪಿಎಸ್ಗೆ 9 ಪ್ರಶ್ನೆಗಳನ್ನು ಕೇಳಿದ್ದಾರೆ. ಇದಾದ ಮೇಲೂ ಇಂದು ಅನೇಕ ಬೆಳವಣಿಗೆಗಳಾಗಿದ್ದು ಪತ್ರಿಕಾ ಗೋಷ್ಟಿ ಕರೆದು ರೋಹಿಣಿ ಸಿಂಧೂರಿ ಮಾತನಾಡಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಪ್ರತಿಕ್ರಿಯೆ ನೀಡಿದ್ದು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದಿದ್ದಾರೆ. ಇದೀಗ ಪ್ರಕರಣದ ಬಗ್ಗೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ, ‘ರೋಹಿಣಿ-ರೂಪಾ ಜಟಾಪಟಿ ನೋಡ್ತಿದ್ರೆ ಸರ್ಕಾರ ಇದ್ಯಾ ಇಲ್ವಾ ಅನ್ನಿಸ್ತಿದೆ. ಸರ್ಕಾರದ ಕೆಡರ್ ನಲ್ಲಿ ಇರೋ ಅಧಿಕಾರಿಗಳು ಈ ರೀತಿ ಮಾಡ್ತಾರೆ ಅಂದ್ರೆ ಏನು? ನಾನು ನೋಡಿದ ಹಾಗೇ ಸರ್ಕಾರ ಇಂತಹದ್ದನ್ನು ಗಮನಿಸಬೇಕು. ಸಿಎಸ್ಗೆ ಮಾಹಿತಿ ನೀಡಬೇಕು. ಆದ್ರೆ ಇದನ್ನು ನೋಡ್ತಿದ್ರೆ ಅಧಿಕಾರಿಗಳಿಗೆ ಸರ್ಕಾರ ಅಂದ್ರೆ ಭಯವೇ ಇಲ್ಲ ಎಂದೆನಿಸುತ್ತಿದೆ. ಗೃಹ ಸಚಿವರು ಏನ್ಮಾಡ್ತಿದ್ದಾರೆ? ಸರ್ಕಾರಿ ಅಧಿಕಾರಿಗಳನ್ನು ದೇವಮಾನವರು ಅಂತಾರೆ. ಅವ್ರೇನು ದೇವಲೋಕದಿಂದ ಬಂದಿದ್ದಾರಾ? ಇದೆಲ್ಲ ನೋಡ್ತಿದ್ರೆ ನಗಬೇಕೋ ಅಳಬೇಕೋ ಗೊತ್ತಾಗ್ತಿಲ್ಲ’ ಎಂದು ಸರ್ಕಾರದ ಕಾಲೆಳೆದರು.
ಇನ್ನು ಸಾರಾ ಮಹೇಶ್ ಸಂಧಾನ ವಿಚಾರವಾಗಿಯೂ ಕುಮಾರಸ್ವಾಮಿ ಮಾತನಾಡಿದ್ದು ‘ನನಗೆ ಎಲ್ಲಾ ಗೊತ್ತಿದೆ. ದಾಳಿ ವಿಚಾರ ಹಿಂಗಾಗಿದೆ. ಆ ಹೆಣ್ಣುಮಗಳು ಬರೀ ಕಾಂಟರ್ವರ್ಸಿನೇ. ಎಲ್ಲಿ ಹೋದ್ರು ಆಕೆ ಕಾಟರ್ವರ್ಸಿ ಇಲ್ದೆ ಹೊರಗ್ ಬಂದಿಲ್ಲ. ಇದು ವೈಯಕ್ತಿಕ ವಿಚಾರ. ಈ ರೀತಿ ಮತ್ತೆ ಕಾಂಟರ್ವರ್ಸಿ ಮಾಡಿದ್ರೆ ವೈಯಕ್ತಿಕವಾಗಿ ಹೊರಗ್ ಬರುತ್ತೆ. ಇವತ್ತಿನ ವಿಚಾರ ನೋಡಿದ್ರೆ ಸರ್ಕಾರಕ್ಕೆ ಮುಖ ಇಲ್ಲ. ಇದ್ರಿಂದ ಮುಖ್ಯಮಂತ್ರಿ ಮುಖ ತೋರಿಸೋಕೆ ಆಗಲ್ಲ. ಇದನ್ನ ನೋಡಿದ್ರೆ ಸರ್ಕಾರ ಏನ್ಮಾಡ್ತಿದೆ. ಸರ್ಕಾರಕ್ಕೆ ನಿಯಂತ್ರಣ ಇಲ್ಲ. ನಾನೂ ಸಾರಾಮಹೇಶ್ ಗೆ ಹೇಳಿದ್ದೆ. ಬಿಡಪ್ಪ ಏನೋ ತಪ್ಪಾಗಿದೆ. ಹೆಣ್ಮಗಳು ಬಿಟ್ಬಿಡು ಎಂದು ಹೇಳಿದೆ. ಸಾರಾ ಮಹೇಶ್ ನನ್ನ ಜೊತೆ ಚರ್ಚೆ ಮಾಡಿದ್ರು. ಅವ್ರು ಸುಮ್ಮನಾಗಿ ದೊಡ್ಡತನ ತೋರಿಸಿದರು. ಆದ್ರೆ ಇದು ಮತ್ತೆ ಈ ರೀತಿ ಆಗ್ತಿದೆ. ಇದ್ರ ಬಗ್ಗೆ ಸಿಎಸ್ ಕ್ರಮ ಕೈಗೊಳ್ಳಬೇಕು’ ಎಂದು ಮಾಜಿ ಸಿಎಂ ಹೆಚ್ ಡಿ.ಕೆ ಅಭಿಪ್ರಾಯಪಟ್ಟರು.