ಬೆಂಗಳೂರು: ನೂತನ ಸಚಿವ ಸಂಪುಟ ರಚನೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಮ್ಮ ಸಂಪುಟದ ಸಚಿವರಿಗೆ ತಾತ್ಕಾಲಿಕವಾಗಿ ಒಂದೊಂದು ಜಿಲ್ಲೆಯ ಉಸ್ತುವಾರಿ ನೀಡಿದ್ದರು, ಆದರೆ ಸಚಿವರು ಆಯಾ ಜಿಲ್ಲೆಗಳ ನಿರ್ವಹಣೆ ಮಾಡುವ ಬದಲು ವಿಜಯೋತ್ಸವ ಆಚರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಟ್ವಿಟ್ ಮಾಡುವ ಮೂಲಕ ಹರಿಹಾಯ್ದಿದ್ದಾರೆ.
ಸಚಿವರಿಗೆ ಆಯಾ ಜಿಲ್ಲೆಗಳ ಪ್ರವಾಹ ಪರಿಸ್ಥಿತಿ, ಕೋವಿಡ್ ಸ್ಥಿತಿಗಳ ನಿರ್ವಹಣೆ ಮಾಡುವಂತೆ ಸಿಎಂ ಸೂಚಿಸಿದ್ದರು. ಸಿಎಂ ಬೊಮ್ಮಾಯಿ ಅವರು ಸದಾಶಯದಿಂದ ಜವಾಬ್ದಾರಿ ನೀಡಿದರೆ, ಜವಾಬ್ದಾರಿ ಮರೆತ ಸಚಿವರು ತಮಗೆ ನಿಗದಿಪಡಿಸಿದ ಜಿಲ್ಲೆಯಲ್ಲಿ ವಿಜಯೋತ್ಸವ ಆಚರಿಸಿದ್ದಾರೆ ಎಂದು ಟ್ವಿಟ್ ಮೂಲಕ ಕುಟುಕಿದರು.
ಹೊಸ ಸಚಿವರು ತಮಗೆ ನಿಗದಿ ಪಡಿಸಿದ ಜಿಲ್ಲೆಗಳಿಗೆ ಹೋದಾಗ ಮಾಡಿಸಿಕೊಂಡ ಸನ್ಮಾನಗಳು, ವಿಜಯೋತ್ಸವ, ಅದ್ದೂರಿ ಸ್ವಾಗತ ಕಂಡು ಜನ ನಾಚಿಕೆಪಟ್ಟು ಮರುಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾದರೂ, ಸರ್ಕಾರ ಮತ್ತು ಅದರ ವರ್ತನೆ ಬದಲಾದ ಭಾವನೆ ಯಾರಲ್ಲಿಯೂ ಕಾಣುತ್ತಿಲ್ಲ. ಸಿಎಂ ಬದಲಾದರೆ ಸಾಲದು ಸಿಎಂ ರೀತಿಯೇ ಸಚಿವರೂ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ, ನೆರೆ ಆತಂಕಗಳು ದೂರವಾಗಿಲ್ಲ. 3ನೇ ಅಲೆಯೊಂದು ಬಾಗಿಲ ಬಳಿಯಲ್ಲೇ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅದಕ್ಕೆ ಪೂರಕವೆಂಬಂತೆ ಕೋವಿಡ್ ಪ್ರಕರಣಗಳೂ ಏರುತ್ತಿವೆ. ನೆರೆ ಆತಂಕವೂ ದೂರವಾಗಿಲ್ಲ. ಸಚಿವ ಸ್ಥಾನ ಸಿಕ್ಕಿರುವುದು ಸನ್ಮಾನ ಸ್ವೀಕರಿಸಲು ಅಲ್ಲ. ಸೇವೆ ನೀಡಲು ಎಂಬುದು ಈ ಮಂತ್ರಿ ಕೂಟಕ್ಕೆ ಅರಿವಾಗಲಿ ಎಂದು ಟ್ವಿಟ್ಟರ್ ಸರ್ಕಾರದ ವಿರುದ್ದ ಗುಡುಗಿದ್ದಾರೆ.