More

    ದೇಶ ಕವಲು ದಾರಿಯಲ್ಲಿದೆ, ವೈಮನಸ್ಸುಗಳನ್ನು ದೂರವಿರಿಸಿ ಎಲ್ಲರೊಂದಿಗೆ ಸಹಬಾಳ್ವೆ ನಡೆಸಬೇಕು: ಮಾಜಿ ಸಿಎಂ ಎಚ್​ಡಿಕೆ

    ದಾವಣಗೆರೆ: ಪ್ರಸ್ತುತ ದೇಶ ಕವಲು ದಾರಿಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.

    ಶನಿವಾರ ಹರಿಹರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಶರಣರ-ಸಾಧಕರ-ಹುತಾತ್ಮರ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ದೆಹಲಿಯಲ್ಲಿ ನಡೆದ ಗಲಭೆಯಿಂದ 42ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಅಲ್ಲಿ ಎಲ್ಲ ವರ್ಗದ ಜನರು ಸಂಕಷ್ಟದಲ್ಲಿದ್ದಾರೆ. ಹಿಂದು ಮದುವೆ ಕಾರ್ಯಕ್ರಮಕ್ಕೆ ಮುಸ್ಲಿಂ ಸಮಾಜದವರು ರಕ್ಷಣೆ ಕೊಟ್ಟಂತಹದ್ದನ್ನು ನೋಡಿದ್ದೇವೆ. ಹೀಗಾಗಿ ಹಿಂದು, ಮುಸ್ಲಿಂ ಹಾಗೂ ಕ್ರೈಸ್ತ ಸಂಘರ್ಷಗಳಿಗೆ ನಾವು ಅವಕಾಶ ನೀಡಬಾರದು ಎಂದು ತಿಳಿಸಿದರು.

    ಧಾರ್ಮಿಕ ಗುರುಗಳ ಮಾರ್ಗದರ್ಶನ, ಶಾಂತಿ ಬೋಧನೆಯ ಅಗತ್ಯವಿದೆ. ವೈಮನಸ್ಸುಗಳನ್ನು ದೂರವಿರಿಸಿ ಎಲ್ಲರೊಂದಿಗೆ ಸಹಬಾಳ್ವೆ ನಡೆಸಬೇಕು. ಅಂತಹ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಬೇಕು. ಇದು ಧಾರ್ಮಿಕ ಮುಖಂಡರಿಂದ ಸಾಧ್ಯವೇ ಹೊರತು ರಾಜಕಾರಣಿಗಳಿಂದಲ್ಲ. ಎಲ್ಲ ಗುರುಗಳನ್ನು ಖುದ್ದಾಗಿ ಭೇಟಿ ಮಾಡಿ ಈ ಬಗ್ಗೆ ವಿನಂತಿಸಬೇಕು ಎಂದುಕೊಂಡಿದ್ದೇನೆಂದು ಹೇಳಿದರು.

    ದಾಸೋಹ, ಶಿಕ್ಷಣದ ಕೊಡುಗೆ ನೀಡಿದ ಲಿಂಗೈಕ್ಯ ಶ್ರೀಗಳ ಸ್ಮರಣೆ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಎಚ್​ಡಿಕೆ, ಮಗನ ಮದುವೆಗೆ ಎಲ್ಲ ಶ್ರೀಗಳಿಗೆ ಆಹ್ವಾನ ನೀಡಿದರು.

    ಮುಂಬರುವ ಬಜೆಟ್‌ ಬಗ್ಗೆ ನಾನೇನು ಮಾತನಾಡುವುದಿಲ್ಲ. ಬಜೆಟ್‌ನಿಂದ ದೊಡ್ಡ ಮಟ್ಟದ ನಿರೀಕ್ಷೆ ಹೊಂದಿಲ್ಲ. ಅಭಿವೃದ್ಧಿ ಪೂರಕ ಕಾರ್ಯಕ್ರಮಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ರೈತ ಸಾಲಮನ್ನಾದ ಬಗ್ಗೆ ಈಗಾಗಲೇ ಗೊಂದಲ ಸೃಷ್ಟಿಯಾಗಿದೆ. ನಾನು ಅಧಿಕಾರದಲ್ಲಿದ್ದಾಗ ಗೊಂದಲವಿಲ್ಲದೇ ರೈತರ ಖಾತೆ ಸಾಲಮನ್ನಾ ಯೋಜನೆ ತಲುಪಿಸುವ ವ್ಯವಸ್ಥೆ ಮಾಡಿದ್ದೆ. ದುರ್ಬಳಕೆ ಆಗದಂತೆ ವ್ಯವಸ್ಥೆ ಮಾಡಿದ್ದೆ. ಈಗ ಅದರಲ್ಲಿ ಸಮಸ್ಯೆ ಉದ್ಭವಿಸುವಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts