ಹಾವೇರಿ: ರಾಜ್ಯದ ಏಳು ನೂತನ ವಿಶ್ವವಿದ್ಯಾಲಯಗಳ ಕುಲಪತಿಗಳು, ಕುಲಸಚಿವರು ಹಾಗೂ ಸಿಬ್ಬಂದಿಯ ಹತ್ತು ತಿಂಗಳ ಸಂಬಳ ಕೊನೆಗೂ ಬಿಡುಗಡೆಯಾಗಿದ್ದು, ಮುಂದಿನ ವೇತನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಮಂಡಿಸಿದ ಬಜೆಟ್ನಲ್ಲಿ ಅನುದಾನ ಕಾಯ್ದಿರಿಸಿದ್ದಾರೆ. ಜಿಲ್ಲೆಗೊಂದು ವಿಶ್ವವಿದ್ಯಾಲಯ ಎಂಬ ಪರಿಕಲ್ಪನೆ ಅಡಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ಮಾರ್ಚ್ 21, 2023ರಲ್ಲಿ ಹಾವೇರಿ, ಬಾಗಲಕೋಟೆ, ಬೀದರ್, ಕೊಪ್ಪಳ, ಹಾಸನ, ಕೊಡಗು ಹಾಗೂ ವಾಮರಾಜನಗರದಲ್ಲಿ ಏಳು ಹೊಸ ವಿವಿಗಳನ್ನು ಆರಂಭಿಸಿತ್ತು. ಅಂದಿನಿಂದ ಹತ್ತು ತಿಂಗಳು ಕಳೆದರೂ ಸಂಬಳ ಬಿಡುಗಡೆ ಮಾಡಿರಲಿಲ್ಲ. ಕಂಪ್ಯೂಟರ್, ಸೇರಿದಂತೆ ಮೂಲ ಸೌಕರ್ಯವನ್ನೂ ಕಲ್ಪಿಸಿರಲಿಲ್ಲ. ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಕಗ್ಗತ್ತಲೆಯಲ್ಲಿ ಸಾಗುತ್ತಿತ್ತು. ಈ ಸಮಸ್ಯೆಗಳ ಕುರಿತು ‘ವಿಜಯವಾಣಿ’ ದಿನಪತ್ರಿಕೆ ಫೆ.5ರಂದು ‘ಹೊಸ ವಿವಿ ಕಸಕ್ಕೆ ಸಮಾನ’ ಎಂಬ ಶೀರ್ಷಿಕೆಯಡಿ ರಾಜ್ಯ ಪುಟದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಅಲ್ಲಿನ ಸಮಸ್ಯೆಗಳನ್ನು ಅನಾವರಣಗೊಳಿಸಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ 2023ರ ಮಾರ್ಚ್ನಿಂದ 2024ರ ಜನವರಿವರೆಗಿನ ವೇತನ ಜಮೆ ಮಾಡಿದೆ.
ಬಜೆಟ್ನಲ್ಲಿ ಅನುದಾನ
ರಾಜ್ಯ ಸರ್ಕಾರ ಬಜೆಟ್ನಲ್ಲಿ ವಿವಿಗಳಿಗೆ ಮುಂದಿನ ವೇತನದ ಅನುದಾನವನ್ನು ಕಾಯ್ದಿರಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ಹೊಸ ವಿವಿಗಳ ವೇತನ ಸಮಸ್ಯೆ ಬಗೆಹರಿದಂತಾಗಿದೆ. ವೇತನ ಬಿಡುಗಡೆಯಿಂದಾಗಿ ಏಳು ವಿವಿಗಳ ವಿಸಿ, ರಿಜಿಸ್ಟ್ರಾರ್ಗಳು ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದು, ಹೊಸ ಆಶಾ ಭಾವನೆಯಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗಿದೆ. ವಿವಿಗಳಿಗೆ ಅಗತ್ಯವಿರುವ ತಲಾ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದು ಬಾಕಿ ಇದೆ.