ಹಾವೇರಿ: ಮಹಿಳೆ ಅಬಲೆಯಲ್ಲ ಸಬಲೆ. ಶಿಕ್ಷಣದಿಂದ ವಂಚಿತಳಾದ ಸಂದರ್ಭದಲ್ಲಿಯೇ ಉನ್ನತ ಸಾಧನೆ ಮಾಡಿದ ಮಹಿಳೆ, ಪ್ರಸ್ತುತ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದು, ಸಮಾಜದಲ್ಲಿ ಪುರುಷನನ್ನು ಮೀರಿಸಿ ಮುನ್ನೆಡೆಯುತ್ತಿದ್ದಾಳೆ ಎಂದು ಡಾ.ಗೀತಾ ಸುತ್ತಕೋಟಿ ಹೇಳಿದರು.
ಕಸಾಪ ಜಿಲ್ಲಾ ಮತ್ತು ತಾಲೂಕು ಘಟಕದ ವತಿಯಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುದ್ದಲೀಶ್ವರ ಸ್ವಾಮೀಜಿ, ಸ್ವಾತಂತ್ರ್ಯ ಯೋಧ ಜಿ.ಆರ್.ಮಹಾರಾಜಪೇಟಿ, ತಿರಕಪ್ಪ ಮಹಾರಾಜಪೇಟೆ ಮತ್ತು ಎಂ.ಸಿ.ಕೋವಳ್ಳಿಮಠ ಅವರ ದತ್ತಿನಿಧಿ ಸಮಾರಂಭದಲ್ಲಿ ದತ್ತಿ ಉಪನ್ಯಾಸದ ವೇಳೆ ಅವರು ಮಾತನಾಡಿದರು. ಪ್ರಥಮ ಶಿಕ್ಷಕಿ ಸಾವಿತ್ರಿಭಾಯಿ ಪುಲೆಯ ಜೀವನ ಸಾಧನೆ ಎಲ್ಲಾ ಮಹಿಳೆಗೆ ಮಾದರಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ಬಿ.ಲಿಂಗಯ್ಯ ಮಾತನಾಡಿ, ಸ್ವಾತಂತ್ರ್ಯ ಎನ್ನುವುದು ಒಂದು ಅನನ್ಯ ಅನುಭೂತಿ. ಇಂತಹ ಅಪೂರ್ವ ಅನುಭೂತಿಯ ಹಿಂದೆ ಅನೇಕ ಹುತಾತ್ಮರ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವಿದೆ. ಈ ಭವ್ಯ ಪರಂಪರೆಯನ್ನು ಉಳಿಸಿ, ಬೆಳೆಸಿ ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಮಹತ್ತರ ಜವಾಬ್ದಾರಿ ಭಾರತೀಯರಾದ ನಮ್ಮ ಮೇಲೆ ಇದೆ. ಅಂತಹ ಮಹಾತ್ಮರ ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ದತ್ತಿದಾನಿ ಉಮೇಶ ಮಹಾರಾಜಪೇಟೆ, ಕಸ್ತೂರಮ್ಮ ಮಹಾರಾಜಪೇಟೆ, .ಎನ್.ಎನ್. ದೊಡ್ಡಗೌಡರ, ರೇಣುಕಾ ಗುಡಿಮನಿ, ಎಸ್.ಆರ್. ಹಿರೇಮಠ, ಎಸ್.ಬಿ.ಕಾಳೆ, ಎಸ್.ಎಲ್.ಕಾಡದೇವರಮಠ, ಅಕ್ಕಮಹಾದೇವಿ ಹಾನಗಲ್ಲ, ಸಿ.ಎಸ್. ಮರಳಿಹಳ್ಳಿ, ಅಲ್ಲಾಭಕ್ಷ ದೇವಿಹೊಸೂರ, ಜಿ.ಎನ್. ಹೂಗಾರ, ಕೆ.ಬಿ.ಭಿಕ್ಷಾವರ್ತಿಮಠ, ಸಿ.ಆರ್.ಗಡಿಯಪ್ಪಗೌಡರ, ಸಾಹಿದಾ ನಾಯಕ, ಶಂಕರ ಸುತಾರ, ಎಸ್.ವಿ.ಹಿರೇಮಠ, ಮತ್ತಿತರರು ಉಪಸ್ಥಿತರಿದ್ದರು.
ತಾಲೂಕು ಕಸಾಪ ಅಧ್ಯಕ್ಷ ವೈ.ಬಿ.ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೃಥ್ವಿರಾಜ ಬೇಟಗೇರಿ ದತ್ತಿದಾನಿಗಳ ಪರಿಚಯ ಮಾಡಿದರು. ಈರಣ್ಣ ಬೆಳವಡಿ ಸ್ವಾಗತಿಸಿದರು. ಎಸ್.ಎಂ. ಬಡಿಗೇರ ನಿರೂಪಿಸಿದರು. ಶಿವಬಸವ ಮರಳಿಹಳ್ಳಿ ವಂದಿಸಿದರು.