More

    ವೇದಾಂತ ಕ್ಷೇತ್ರಕ್ಕೆ ಶ್ರೀ ರಾಜವಂದ್ಯ ತೀರ್ಥರ ಕೊಡುಗೆ ಅನನ್ಯ; ಕಾಗಿನೆಲೆಯಲ್ಲಿ ಭಂಡಾರಕೇರಿ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಲಹೆ

    ಹಾವೇರಿ: ಭಕ್ತಿ, ವೇದಾಂತ ಕ್ಷೇತ್ರಕ್ಕೆ ಶ್ರೀ ರಾಜವಂದ್ಯ ತೀರ್ಥರ ಕೊಡುಗೆ ಅನನ್ಯವಾಗಿದೆ ಎಂದು ಉಡುಪಿಯ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.
    ಬ್ಯಾಡಗಿ ತಾಲೂಕು ಕಾಗಿನೆಲೆಯ ಆದಿಕೇಶವ ದೇವಸ್ಥಾನದ ಎದುರಿನ ಭಂಡಾರಕೇರಿ ಮಠದ ಪರಂಪರೆಯ ಹಿರಿಯ ಯತಿ ಶ್ರೀ ರಾಜವಂದ್ಯತೀರ್ಥರ ಮೂಲವೃಂದಾವನ ಸನ್ನಿಧಾನದಲ್ಲಿ ಸೋಮವಾರ ಆರಾಧನಾ ಉತ್ಸವ ನೆರವೇರಿಸಿ ಆಶೀರ್ವಚನ ನೀಡಿದರು.
    ಕಾಗಿನೆಲೆಯು ಶ್ರೀ ಆದಿಕೇಶವ ಮತ್ತು ನರಸಿಂಹದೇವರ ವಿಶೇಷ ಸನ್ನಿಧಾನವಿರುವ ಪುಣ್ಯಕ್ಷೇತ್ರ. ಇದೇ ದೈವಿಕ ಪರಿಸರದಲ್ಲಿ ಭಕ್ತ ಕನಕದಾಸರು ಭಗವಂತನ ಸೇವೆ ಮಾಡಿ, ಅನುಗ್ರಹ ಪಡೆದು ಹರಿದಾಸ ಪಂಥಕ್ಕೆ ಅಮೋಘ ಸಾಹಿತ್ಯ ಸೇವೆ ಸಲ್ಲಿಸಿದರು. ಇಂತಹ ದೇಗುಲದ ಆವರಣದಲ್ಲೇ ನಮ್ಮ ಪರಂಪರೆಯ ಹಿರಿಯ ಸನ್ಯಾಸಿ ಶ್ರೀ ರಾಜವಂದ್ಯ ತೀರ್ಥರು ಸಂಚಾರಕ್ಕೆ ಬಂದ ಸಂದರ್ಭದಲ್ಲಿ ವೃಂದಾವನಸ್ಥರಾದರು. ಹಲವಾರು ತೀರ್ಥ ಕ್ಷೇತ್ರಗಳಿಗೆ ಕಾಲ್ನಡಿಗೆಯಲ್ಲೇ ಸಂಚರಿಸಿ, ಧರ್ಮ ಜಾಗೃತಿ ಮತ್ತು ಸಾತ್ವಿಕ ಸಂದೇಶ ನೀಡಿದ್ದ ಅವರು ಸಮಾಜಕ್ಕೆ ಬಹು ಮೌಲ್ಯಯುತ ಕೊಡುಗೆಗಳನ್ನು ದಯಪಾಲಿಸಿದ್ದಾರೆ ಎಂದರು.
    ಇತ್ತೀಚೆಗೆ ನಡೆದ ಉತ್ಖನನ ಮತ್ತು ಸಂಶೋಧನೆಗಳಿಂದ ಗುರುಗಳ ಈ ವೃಂದಾವನ ಪತ್ತೆಯಾಗಿರುವುದು ವಿಶೇಷ. ಈ ತಾಣವನ್ನು (ಶಿಲಾಮಂಟಪ) ನವೀಕರಣಗೊಳಿಸಿದ್ದು, ಇಂದು ಅದು ಸೇವೆಗೆ ಸಮರ್ಪಣೆಯಾಗಿದೆ. ನಾಡಿನ ಸಂಸ್ಕೃತಿ ಮತ್ತು ಮಾಧ್ವ ಪರಂಪರೆ ಸಂಪ್ರದಾಯಗಳನ್ನು ಉಳಿಸಿ, ಬೆಳೆಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
    ಗುರುಗಳ ದರ್ಶನಕ್ಕಾಗಿ ಕಾಗಿನೆಲೆಗೆ ಬಂದಿದ್ದ ಶಾಸಕ ಬಸವರಾಜ ಶಿವಣ್ಣನವರ ಅವರನ್ನು ಶ್ರೀಗಳು ಸನ್ಮಾನಿಸಿದರು.
    ದಾಸ ಸಾಹಿತ್ಯದ ಮಹತ್ವ ಕಾಪಾಡಿ
    ಕನ್ನಡ ಸಾಹಿತ್ಯದಲ್ಲೇ ವಿಶೇಷ ಸ್ಥಾನಗಳಿಸಿರುವ ದಾಸ ಸಾಹಿತ್ಯಕ್ಕೆ ಕನಕದಾಸರು ಮೌಲ್ಯಯುತ ಪದ, ಪದ್ಯಗಳನ್ನು ನೀಡಿದ್ದಾರೆ. ಹಾಗಾಗಿ ನಾವು ಕನಕದಾಸರ ಸಾಹಿತ್ಯ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕನಕದಾಸರು ಕೇವಲ ಒಂದು ಸಮುದಾಯದ ನಾಯಕರಲ್ಲ, ಅವರು ಮತ್ತು ಅವರ ಸಾಹಿತ್ಯ ನಮ್ಮ ನಾಡಿನ ಬಹುದೊಡ್ಡ ಆಸ್ತಿ. ಸರ್ಕಾರ ಈ ನಿಟ್ಟಿನಲ್ಲಿ ಬಹುವಿಧ ಕಾರ್ಯಯೋಜನೆ ಹಮ್ಮಿಕೊಂಡು ಕನಕ ಸಾಹಿತ್ಯದ ಅರಿವು ಆಂದೋಲನ ನಡೆಸಬೇಕು ಎಂದು ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts