More

    ಮಠ, ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದೆ; ಕನ್ನಡ ಜನಪದ ಪರಿಷತ್ ಜಿಲ್ಲಾ ಘಟಕಕ್ಕೆ ಚಾಲನೆ ನೀಡಿ ಶ್ರೀ ಸದಾಶಿವ ಸ್ವಾಮೀಜಿ ಹೇಳಿಕೆ

    ಹಾವೇರಿ: ಮಠಗಳಿಗೂ ಜನಪದ ಸಂಸ್ಕೃತಿಗೂ ಅವನಾಭಾವ ಸಂಬಂಧವಿದೆ. ಜನಪದ ಹಾಡುಗಳು ಆರೋಗ್ಯದ ಮೂಲ ಸೂತ್ರಗಳು. ಸರ್ವಜ್ಞ ಕನಕದಾಸರು ಸೇರಿದಂತೆ ಸಂತ ಮಹಾಂತರು ಜನಪದ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ ಎಂದು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
    ನಗರದ ರಾಚೋಟೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ಜನಪದ ಪರಿಷತ್ ಜಿಲ್ಲಾ ಘಟಕದ ಉದ್ಘಾಟನೆ, ಪದಗ್ರಹಣ, ಸನ್ಮಾನ ಹಾಗೂ ಜಾನಪದ ವೈಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆಧುನಿಕತೆಯ ಹಿಂದೆ ಬಿದ್ದಿರುವ ಇಂದಿನ ಜಗತ್ತಿಗೆ ಜನಪದ ವೈಭವ ಅವಶ್ಯವಾಗಿ ಬೇಕಾಗಿದೆ. ಭಕ್ತಿ ಕಲಾ ಪರಂಪರೆ ಉಳಿಸುವಲ್ಲಿ ಮಠ ಮಂದಿರಗಳ ಪಾತ್ರ ಬಹು ದೊಡ್ಡದಾಗಿತ್ತು ಎಂದು ಹಾವೇರಿ ತಿಳಿಸಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಜನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಮಾತನಾಡಿ, ಜನಪದ ಮೂಲೆ ಗುಂಪಾಗುವ ಕಾಲದಲ್ಲಿ ಅದನ್ನು ಮತ್ತೆ ಗತ ವೈಭವದ ಕಾಲಕ್ಕೆ ತೆಗೆದುಕೊಂಡು ಹೋಗಲು ಪಣ ತೊಟ್ಟಿದ್ದೇವೆ. ಜನಪದ ವಿಶ್ವವಿದ್ಯಾಲಯ ವಿದ್ವಾಂಸರಿಗೆ ಸೀಮಿತವಾಗಿದೆ. ಕಲೆ ಪ್ರೋತ್ಸಾಹದಲ್ಲಿ ಅದರ ಕಾಳಜಿ ಇಲ್ಲ. ಕೃಷಿ ಸಂಸ್ಕೃತಿಯಿಂದ ಬಂದ ಜನಪದ, ಅದರಲ್ಲೂ ಮಹಿಳೆಯರಿಂದ ಹೆಚ್ಚು ಪ್ರಸ್ತುತವಾದ ಸಾಹಿತ್ಯ ಇದಾಗಿದೆ. ಜನಪದ ಕಲಾವಿದರಿಗೆ ಗೌರವ ಸಿಗಬೇಕು. ಮಕ್ಕಳಲ್ಲಿ ಈಗಲೇ ಜನಪದ ಸಂಸ್ಕೃತಿಯ ಅರಿವು ಮೂಡಿಸಿದರೆ ಜನಪದ ದೀರ್ಘ ಕಾಲಕ್ಕೆ ಉಳಿಯಬಲ್ಲದು ಎಂದರು.
    ರಾಜ್ಯೋತ್ಸವ ಪ್ರಸಸ್ತಿ ಪುರಸ್ಕೃತ ಜನಪದ ವಿದ್ವಾಂಸ ಡಾ.ಶಂಭು ಬಳಿಗಾರ ಮಾತನಾಡಿ, ಕಾಯಕ ಮೂಲಕ ಸಂಸ್ಕೃತಿಯಿಂದ ಬಂದ ಜನಪದ ಸಾಹಿತ್ಯ, ದುಡಿಮೆಯ ಜತೆಗೆ ಸುಖ ದುಃಖ ನೋವು ನಲಿವು ಎಲ್ಲವನ್ನೂ ಹಾಡಿ ಹೇಳಿ ಸಮಾಧಾನ ಸಂತೋಷ ಪಡಿದಿದೆ. ಬದುಕು ಕೂಡ ಒಂದು ಹಾಡೇ ಆಗಿದೆ. ನಮ್ಮದು ಹಂಚಿಕೊಂಡು ಮನುಷ್ಯತ್ವದಿಂದ ಬದುಕು ಸಂಸ್ಕೃತಿ. ನಮ್ಮ ಸಂಬಂಧಗಳು ದುಡ್ಡಿನ ಮೂಲದಲ್ಲಿಲ್ಲಿ. ಅನ್ನದ ಋಣದಲ್ಲಿದೆ, ಪರಸ್ಪರ ಕ್ಷೇಮಕ್ಕೆ ಇಲ್ಲಿ ಮಹತ್ವವಿದೆ. ಈಗ ಮೌಲ್ಯಗಳು ಜಾಗೃತವಾಗಬೇಕಾದ ಕಾಲ ಎಂದರು.
    ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪರಿಮಳ ಜೈನ್, ಪದಾಧಿಕಾರಿಗಳಾದ ಹರೀಶ ಕಲಾಲ, ರಾಘವೇಂದ್ರ ಕಬಾಡಿ, ಶಶಿಕಲಾ ಅಕ್ಕಿ, ಲಿಂಗರಾಜ ಕಮ್ಮಾರ, ಕರಸಪ್ಪ ಪೂಜಾರ, ಬಸವರಾಜ ಶಿಗ್ಗಾಂವಿ, ಚಂದ್ರಶೇಖರ ಕುಳೇನೂರ, ಶಿವಾನಂದ ಕ್ಯಾಲಕೊಂಡ ಅವರಿಗೆ ಪದಗ್ರಹಣ ಮಾಡಲಾಯಿತು.
    ಜಿಲ್ಲಾಧ್ಯಕ್ಷ ಗುರುಶಾಂತ ಎತ್ತಿಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪೂರ ಆಶಯ ನುಡಿ ನುಡಿದರು. ರಾಚೋಟೇಶ್ವರ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಎಸ್.ವಿ.ಹಿರೇಮಠ, ಸಾಹಿತಿ ಲಿಂಗರಾಜ ಕಮ್ಮಾರ, ಇತರರಿದ್ದರು.
    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
    ದಾನೇಶ್ವರಿ ಹಾಲಪ್ಪನವರ, ವೈಷ್ಣವಿ ದಿನ್ನಿಮನಿ ಪ್ರಾರ್ಥಿಸಿದರು. ಚಂದ್ರಶೇಖರ ಕುಳೇನೂರ ಸ್ವಾಗತಿಸಿದರು. ರಾಘವೇಂದ್ರ ಕಬಾಡಿ ನಿರೂಪಿಸಿದರು. ಪರಿಮಳ ಜೈನ್ ವಂದಿಸಿದರು.
    ಜನಪದ ವೈಭವ ಪ್ರಶಸ್ತಿ :
    ಸಿದ್ದಮತಿ ನೆಲವಿಗಿ, ಫಕ್ಕೀರೇಶ ಬಿಶೆಟ್ಟಿ, ಪ್ರಭು ಗುರಪ್ಪನವರ, ಹನುಮಗೌಡ ಗಂಗನಗೌಡ್ರ, ಶೇಖಪ್ಪ ಬಿಳಕಿ, ಪ್ರಕಾಶ ಕೊರಮರ, ಮಹೇಶ್ವರಗೌಡ ಲಿಂಗದಹಳ್ಳಿ, ಲತಾ ಪಾಟೀಲ, ಹುನುಮಂತಪ್ಪ ಬಣಕಾರ, ಡಿಳ್ಳೆಪ್ಪ ಚಿನ್ನಿಕಟ್ಟಿ ಅವರಿಗೆ ಜಾನಪದ ವೈಭವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts