ಹಾವೇರಿ: ನಗರದ ವಾಲ್ಮೀಕಿ ವೃತ್ತದ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯದ ಸುಮಾರು 15 ವಿದ್ಯಾರ್ಥಿನಿಯರನ್ನು ನಸುಕಿನ ಜಾವ ಪಿಬಿ ರಸ್ತೆ ದಾಟಿ ಕಸ ಎಸೆಯಲು ಬಳಕೆ ಮಾಡಿಕೊಳ್ಳಲಾಗಿದ್ದು, ಇಂತಹ ಅಪಾಯಕಾರಿ ಕೆಲಸಕ್ಕೆ ವಿದ್ಯಾರ್ಥಿನಿಯರನ್ನು ಬಳಸಿಕೊಂಡ ವಾರ್ಡನ್ ಅಮಾನತು ಮಾಡುವಂತೆ ಎಸ್ಎಫ್ಐ ಒತ್ತಾಯಿಸಿದೆ.
ವಿದ್ಯಾರ್ಥಿಗಳು ಅಭ್ಯಾಸ ಮಾಡಲೆಂದು ತಮ್ಮ ಮನೆ ಬಿಟ್ಟು ವಸತಿ ನಿಲಯಕ್ಕೆ ಬಂದಿರುತ್ತಾರೆ. ಸರ್ಕಾರ ವಿದ್ಯಾರ್ಥಿಗಳನ್ನು ನೋಡಿಕೊಳ್ಳಲು ಮೂಲ ಸೌಕರ್ಯ ನೀಡಿ ಜತೆಗೆ ಅಡುಗೆ ಸಿಬ್ಬಂದಿ, ರಾತ್ರಿ ಕಾವಲುಗಾರರು, ಹಾಸ್ಟೆಲ್ ಉಸ್ತುವಾರಿ ನೋಡಿಕೊಳ್ಳಲು ಲಕ್ಷಾಂತರ ಹಣ ಖರ್ಚು ಮಾಡುತ್ತದೆ. ಇವರನ್ನು ನೋಡಿಕೊಳ್ಳಲೆಂದೇ ಸರ್ಕಾರ ವೇತನ ಕೊಟ್ಟು ಮೇಲ್ವಿಚಾರಕರನ್ನು ನೇಮಿಸಿದೆ. ಇಷ್ಟೆಲ್ಲ ಸೌಲಭ್ಯಗಳಿದ್ದರೂ ವಾರ್ಡನ್ ಶ್ರಮದಾನದ ನೆಪದಲ್ಲಿ ಮಕ್ಕಳಿಗೆ ಕೆಲಸ ಹಚ್ಚಿದ್ದಾರೆ. ಅಪಾಯಕಾರಿ ಪಿಬಿ ರಸ್ತೆ ದಾಟಿ ಕಸ ಚೆಲ್ಲಲು ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಎಸ್ಎಫ್ಐ ಪ್ರಶ್ನಿಸಿದೆ.
ಜಿಲ್ಲಾಧಿಕಾರಿಯವರು ಈ ಕೂಡಲೇ ಮಧ್ಯ ಪ್ರವೇಶಿಸಿ ವಾರ್ಡನ್ ಅಮಾನತು ಮಾಡಬೇಕು ಎಂದು ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಒತ್ತಾಯಿಸಿದ್ದಾರೆ.