More

    ಜಾತಿ, ಧರ್ಮ, ಭಾಷೆ ಸಮಸ್ಯೆಗೆ ಕುವೆಂಪು ಚಿಂತನೆ ಪರಿಹಾರ; ಡಿಡಿಪಿಯು ಡಾ.ಉಮೇಶಪ್ಪ ಎಚ್. ಅಭಿಪ್ರಾಯ

    ಹಾವೇರಿ: ಸಮಕಾಲೀನ ಸಮಾಜದಲ್ಲಿ ಜಾತಿ, ಧರ್ಮ, ಭಾಷೆ ಕಾರಣಗಳಿಗೆ ಜರುಗುತ್ತಿರುವ ಸಮಸ್ಯೆಗಳಿಗೆ ರಾಷ್ಟ್ರಕವಿ ಕುವೆಂಪು ಅವರ ಚಿಂತನೆಗಳು ಪರಿಹಾರ ಒದಗಿಸಬಲ್ಲವು ಎಂದು ಡಿಡಿಪಿಯು ಡಾ.ಉಮೇಶಪ್ಪ ಎಚ್. ಅಭಿಪ್ರಾಯಪಟ್ಟರು.
    ನಗರದ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ವಿಶ್ವಗುರು ವಿದ್ಯಾವರ್ಧಕ ಸೇವಾ ಸಂಸ್ಥೆ ಹಾಗೂ ಭಾವಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯಡಿ ಆಯೋಜಿಸಿದ್ದ ‘ವಿಶ್ವ ಮಾನವ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮನ್ನು ಅನ್ವೇಷಣೆಗೊಳಪಡಿಸುವ ಕುವೆಂಪು ಒಬ್ಬ ಚಿಂತಕನಾಗಿ, ಕವಿತೆ, ನಾಟಕ, ಕಾದಂಬರಿ ಬರವಣಿಗೆಯ ಸಾಹಿತ್ಯದ ಜತೆಗೆ ಸಮಾಜವನ್ನು ವಿಮರ್ಶೆಗೊಳಪಡಿಸಿದವರು. ಪಾರಂಪರಿಕ ಧಾರ್ಮಿಕ ಸಂಕೋಲೆಗಳಿಂದ ಕಳಚಿ ಮನುಷ್ಯ ಮನುಷ್ಯನಾಗಿ ಬದುಕಬೇಕು. ನಿಸರ್ಗದಲ್ಲಿರದ ತಾರತಮ್ಯ ಮನುಷ್ಯ ಜಗತ್ತಿನಲ್ಲಿರುವ ಬಗ್ಗೆ, ದಬ್ಬಾಳಿಕೆ ಹಿಂಸೆಯ ಪ್ರತಿರೋಧ ಕುರಿತು ಅವರ ಚಿಂತನೆಗಳು ಪ್ರಸ್ತುತ ದಿನಗಳಿಗೂ ಅನ್ವಯಿಸುತ್ತವೆ. ಅವರ ಸಂದೇಶಗಳಲ್ಲಿ ಸಾಂತ್ವನ ಮತ್ತು ಆದರ್ಶ ಮೌಲ್ಯಗಳಿವೆ ಎಂದರು.
    ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗಯ್ಯ ಬಿ.ಹಿರೇಮಠ ಮಾತನಾಡಿ, ಕುವೆಂಪು ಮನುಜ ಮತ ವಿಶ್ವಪಥ ಎಂಬ ಸಂದೇಶ ಸಾರಿದರು. ಈ ಮೂಲಕ ಸಮಾಜ ಪರಿವರ್ತನೆಯ ಜತೆಗೆ ಯುಗ ಪರಿವರ್ತಕರಾಗಿ ಗುರುತಿಸಿಕೊಂಡು ವಿಶ್ವದ ದಾರ್ಶನಿಕರ ಸಾಲಿನಲ್ಲಿ ಗಮನ ಸೆಳೆದರು ಎಂದರು.
    ಅಧ್ಯಕ್ಷತೆ ವಹಿಸಿದ್ದ ಚಿತ್ರಕಲಾವಿದ ಕರಿಯಪ್ಪ ಹಂಚಿನಮನಿ ಮಾತನಾಡಿ, ಸೂಕ್ಷ್ಮ ಸಂವೇದನಾಶೀಲ ಸ್ವಭಾವದ ಕುವೆಂಪು ಅವರ ಚಿಂತನೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕಾರ್ಯವಾಗಬೇಕು ಎಂದರು.
    ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ವೈ.ಬಿ.ಆಲದಕಟ್ಟಿ, ನೈಸ್ ಅಕಾಡೆಮಿ ಮುಖ್ಯಸ್ಥ ನಿಂಗರಾಜು ಸುಳ್ಳಳ್ಳಿ, ಭಾವ ಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಶೇಖರ ಭಜಂತ್ರಿ ಮಾತನಾಡಿದರು.
    ಈರಣ್ಣ ಬೆಳವಡಿ, ಸೋಮನಾಥ ಡಿ., ಹನುಮಂತಸಿಂಗ್ ರಜಪೂತ, ನೇತ್ರಾವತಿ ಅಂಗಡಿ, ವಾಗೀಶ ಹೂಗಾರ, ಮಂಜುನಾಥ ವಾಲ್ಮೀಕಿ, ಅಶ್ವಿನಿ ಕುಸನೂರ, ದಾನೇಶ್ವರಿ ಶಿಗ್ಗಾವಿ, ಮುತ್ತರಾಜ ಗುತ್ತಲ, ಐಶ್ವರ್ಯ ಡೊಳ್ಳಿನ, ಭೂಮಿಕಾ ರಜಪೂತ, ಕವನಾ ಕಲ್ಲನಗೌಡ್ರ ಕುವೆಂಪು ವಿರಚಿತ ಕಾವ್ಯ ವಾಚಿಸಿದರು.
    ಸಾಹಿತಿ ಸತೀಶ ಕುಲಕರ್ಣಿ, ಎಸ್.ಆರ್.ಹಿರೇಮಠ, ರಾಜೇಂದ್ರ ಹೆಗಡೆ, ಉಪಸ್ಥಿತರಿದ್ದರು. ಗೂಳಪ್ಪ ಅರಳಿಕಟ್ಟಿ ನಿರೂಪಿಸಿದರು. ಸಿದ್ದೇಶ್ವರ ಹುಣಸಿಕಟ್ಟಿಮಠ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts