More

    ಗುಣಮಟ್ಟದ ಪೈಪ್ ಕೊಡಿ, ಇಲ್ಲವೇ ಬಡ್ಡಿಸಹಿತ ಹಣ ಪಾವತಿಸಿ; ಅಂಗಡಿ ಮಾಲೀಕರಿಗೆ ಗ್ರಾಹಕರ ಆಯೋಗ ಸೂಚನೆ

    ಹಾವೇರಿ: ಖರೀದಿ ಮಾಡಿದ ರೈತನಿಗೆ ಉತ್ತಮ ಗುಣಮಟ್ಟದ ಪೈಪ್‌ಗಳನ್ನು ಪೂರೈಸಬೇಕು. ಇಲ್ಲವಾದರೆ ಅದರ ಮೊತ್ತವನ್ನು ಪಾವತಿಸಬೇಕು ಎಂದು ಉತ್ತಮ ಗುಣಮಟ್ಟದ ಪಿವಿಸಿ ಪೈಪ್‌ಗಳನ್ನು ಪೂರೈಸದ ಹುಬ್ಬಳ್ಳಿಯ ಅಂಗಡಿ ಮಾಲೀರೊಬ್ಬರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.
    ಹಾನಗಲ್ಲ ತಾಲೂಕು ಮಾಸನಕಟ್ಟಿ ಗ್ರಾಮದ ಮಲ್ಲಿಕಾರ್ಜುನ ರಾಯಪ್ಪ ಬಿಜಾಪುರ ಎಂಬುವರು ತಮ್ಮ ಜಮೀನಲ್ಲಿ ಕೊಳವೆ ಬಾವಿ ಕೊರೆಸುವ ಸಲುವಾಗಿ ಹುಬ್ಬಳ್ಳಿಯ ಅಂಗಡಿಯೊಂದರಲ್ಲಿ 16, ಡಿಸೆಂಬರ್ 2022ರಂದು 180 ಎಂ.ಎಂ. ಅಳತೆಯ 6 ಕೆ.ಜಿ. ಸಾಮರ್ಥ್ಯದ ಐದು ಪಿವಿಸಿ ಪೈಪ್‌ಗಳನ್ನು ಹಾಗೂ 90 ಎಂ.ಎಂ.ಅಳತೆಯ ಆರು ಕೆ.ಜಿ. ಸಾಮರ್ಥ್ಯದ 50 ಪಿವಿಸಿ ಪೈಪ್‌ಗಳನ್ನು 37ಸಾವಿರ ರೂ. ಕೊಟ್ಟು ಖರೀಸಿದ್ದರು. ಆದರೆ, 19,470 ರೂ.ಗೆ ಮಾತ್ರ ಬಿಲ್ ನೀಡಿದ್ದರು. ಇದನ್ನು ವಿಚಾರಿಸಿದಾಗ ನಮ್ಮ ಪೈಪ್‌ಗಳಿಗೆ ಏನೂ ಆಗುವುದಿಲ್ಲ ನಿಮಗೆ ಬಿಲ್ಲಿನ ಅವಶ್ಯಕತೆ ಬರುವುದಿಲ್ಲ ಎಂದು ಹೇಳಿದ್ದರು.
    ಮಲ್ಲಿಕಾರ್ಜುನ ಅವರು ತಮ್ಮ ಜಮೀನಿನಲ್ಲಿ ಪೈಪ್ ಅಳವಡಿಸಿ ನೀರು ಸರಬರಾಜು ಮಾಡಲು ಕೊಳವೆಬಾವಿ ಚಾಲೂ ಮಾಡಿದಾಗ ಎಲ್ಲ ಪೈಪ್‌ಗಳು ಒಡೆದು ಹೋಗಿದ್ದವು. ಒಡೆದ ಪೈಪ್‌ಗಳನ್ನು ತೋರಿಸಿ ಉತ್ತಮ ಗುಣಮಟ್ಟದ ಪೈಪ್ ಕೊಡುವಂತೆ ಕೇಳಿದಾಗ ಅಂಗಡಿಯವರು ಸ್ಪಂದಿಸಲಿಲ್ಲ. ಹಾಗಾಗಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.
    ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಬಿ.ಎಸ್.ಈಶ್ವರಪ್ಪ ಹಾಗೂ ಮಹಿಳಾ ಸದಸ್ಯೆ ಉಮಾದೇವಿ ಹಿರೇಮಠ ನೇತೃತ್ವದ ತಂಡ, ಗ್ರಾಹಕನಿಗೆ ಉತ್ತಮ ಗುಣಮಟ್ಟದ ಪಿವಿಸಿ ಪೈಪ್‌ಗಳನ್ನು ನೀಡಬೇಕು ಅಥವಾ ಪೈಪ್ ಖರೀದಿಗೆ ಪಾವತಿಸಿದ 37 ಸಾವಿರ ರೂ.ಗೆ ಶೇ.6ರಷ್ಟು ಬಡ್ಡಿ ಸೇರಿಸಿ 30 ದಿನದೊಳಗಾಗಿ ಪಾವತಿಸಲು ಆದೇಶಿಸಿದೆ. ಮಾನಸಿಕ, ದೈಹಿಕ ವ್ಯಥೆಗಾಗಿ ಮೂರು ಸಾವಿರ ರೂ. ಹಾಗೂ ಪ್ರಕರಣದ ಖರ್ಚು ಮೂರು ಸಾವಿರ ರೂ. ಪಾವತಿಸಬೇಕು. ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ.9ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಆಯೋಗ ಸೂಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts