ಹಟ್ಟಿಚಿನ್ನದಗಣಿ: ಎಐಟಿಯುಸಿ ಅಧಿಕಾರಕ್ಕೆ ಬಂದರೆ ವೈದ್ಯಕೀಯ ಅನರ್ಹತೆ (ಮೆಡಿಕಲ್ ಅನ್ಫಿಟ್) ಯೋಜನೆಯಡಿ ಕಾರ್ಮಿಕ ಮಕ್ಕಳಿಗೆ ಉದ್ಯೋಗ ನೀಡುವ ಯೋಜನೆ ಜಾರಿಗೆ ತರುವುದು ಶತಸಿದ್ಧ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಹೇಳಿದರು.
ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೆಡಿಕಲ್ ಅನ್ಫಿಟ್ ಯೋಜನೆ ಹಾಗೂ ಸ್ಥಳಿಯವೃಂದದಲ್ಲಿ (ಹಟ್ಟಿ ಪಟ್ಟಣದ 20 ಕಿಮೀ ವ್ಯಾಸ) ನೇಮಕಾತಿ ಮಾಡಿಕೊಳ್ಳಬೇಕೆಂಬ ನಿಯಮವಿದ್ದರೂ ಕಳೆದ ಅವಧಿಯಲ್ಲಿ ಅಧಿಕಾರದಲ್ಲಿದ್ದ ಟಿಯುಸಿಐ ನೇತೃತ್ವದ ಕಾರ್ಮಿಕ ಸಂಘ ಕಾರ್ಮಿಕರಿಗೆ ಪೊಳ್ಳು ಭರವಸೆ ನೀಡಿ, ಅಧಿಕಾರಾವಧಿಯಲ್ಲಿ ಆಂತರಿಕ ಕಚ್ಚಾಟದಿಂದ ಕಾಲಹರಣ ಮಾಡಿ ನೌಕರಿ ಕಲ್ಪಿಸಿಕೊಡುವಲ್ಲಿ ವಿಫಲವಾಗಿದೆ ಎಂದರು.
ಮಾರಣಾಂತಿಕ ಕಾಯಿಲೆಗೆ ತುತ್ತಾಗಿ, ಭೂಕೆಳಮೈ ವಿಭಾಗದಲ್ಲಿ ಅಪಾಯದ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಅನುಕೂಲವಾಗಬೇಕೆಂದು ಕಾರ್ಮಿಕರ ಮಕ್ಕಳಿಗೆ ಉದ್ಯೋಗ ನೀಡುತ್ತಾ ಬಂದಿರುವುದು ವಾಡಿಕೆ. ನಾವು ಅದನ್ನು ಮುಂದುವರಿಸುತ್ತೇವೆ ಎಂದರು.
ಜ.8ರಂದು ಬೆಂಗಳೂರಿನಲ್ಲಿ ಟ್ರೇಡ್ಯೂನಿಯನ್ಗಳ ರಾಜ್ಯ ಸಮಾವೇಶವಿದ್ದು, ಫೆಬ್ರುವರಿ 23, 24 ರಂದು ನಡೆಯುವ ರಾಷ್ಟ್ರವ್ಯಾಪಿ ಮುಷ್ಕರ ಕುರಿತು ರೈತ, ಕನ್ನಡಪರ ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯ-ಕೇಂದ್ರ ಸರ್ಕಾರದ ನೀತಿ ವಿರುದ್ಧ ಹೋರಾಟದ ಕಾರ್ಯತಂತ್ರ ರೂಪಿಸಲಾಗುವುದು ಎಂದರು.
ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಎಸ್.ಎಂ ಶಫಿ, ಏಐಟಿಯುಸಿ ನಗರಘಟಕದ ಅಧ್ಯಕ್ಷ ಶಾಂತಪ್ಪ ಆನ್ವರಿ ಪ್ರಮುಖರಾದ ಡಿ.ಎಚ್ ಕಂಬಳಿ, ನರಸಿಂಗಬಾನ್ ಠಾಕೂರ್, ವೆಂಕೋಬ್ ಮಿಯ್ಯಪೂರ್, ಭಾಷುಮಿಯಾ, ಸಿದ್ಧಪ್ಪ ಮುಂಡರಗಿ, ಜೆ.ಎಸ್ ಹನುಮಂತ ಸುಣ್ಣದಕಲ್ ಇದ್ದರು.