ಚೆನ್ನೈ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ರನ್ನು ಕಾಲಿವುಡ್ ನಟ ವಿಶಾಲ್ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹೋಲಿಸಿ ಟ್ವೀಟ್ ಮಾಡಿದ್ದಾರೆ.
ನಿಮ್ಮ ದಿಟ್ಟತನಕ್ಕೊಂದು ಹ್ಯಾಟ್ಸ್ ಆಫ್, ಯಾವುದು ತಪ್ಪ ಮತ್ತು ಯಾವುದು ಸರಿ ಎನ್ನುವ ವಿಚಾರದಲ್ಲಿ ಧ್ವನಿಯೆತಲ್ಲು ನೀವು ಎಂದಿಗೂ ಎರಡು ಬಾರಿ ಯೋಚಿಸಿಯೇ ಇಲ್ಲ. ಇದು ನಿಮ್ಮ ವೈಯಕ್ತಿಕ ಸಮಸ್ಯೆಯಲ್ಲ, ಸರ್ಕಾರವೇ ನಿಮ್ಮ ವಿರುದ್ಧವಾಗಿದ್ದರೂ ನೀವು ಕುಗ್ಗದೇ ಗಟ್ಟಿಯಾಗಿ ಉಳಿಯುವ ಮೂಲಕ ಒಂದು ದೊಡ್ಡ ಉದಾಹರಣೆಯಾಗಿ ನಿಂತಿದ್ದೀರಿ. ಇದು 1920ರ ಅಪ್ರತಿಮ ಹೋರಾಟಗಾರ ಭಗತ್ ಸಿಂಗ್ ಹೋಲುವಂತಿದೆ.
ಯಾವುದು ಸರಿಯಿಲ್ಲ ಎಂದು ಕಂಡುಬಂದಾಗ ಸರ್ಕಾರದ ವಿರುದ್ಧ ಧ್ವನಿ ಏರಿಸಲು ನೀವು ಉದಾಹರಣೆಯೊಂದನ್ನು ಸ್ಥಾಪಿಸಿದ್ದೀರಿ ಮತ್ತು ಸರ್ಕಾರದ ವಿರುದ್ಧ ಧ್ವನಿಯೇರಿಸಲು ಸೆಲೆಬ್ರಿಟಿಯೇ ಆಗಿರಬೇಕಂತಲ್ಲ. ಅದು ಸಾಮಾನ್ಯ ವ್ಯಕ್ತಿಯು ಆಗಿರಬೇಕು. ಈ ವಿಚಾರದಲ್ಲಿ ನಾನು ನಿಮಗೆ ನಮಸ್ಕರಿಸುತ್ತೇನೆಂದು ವಿಶಾಲ್, ಕಂಗನಾಗೆ ಪೋಸ್ಟ್ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇನ್ನು ವಿಶಾಲ್ ಈ ಹಿಂದೆ ಜಲ್ಲಿಕಟ್ಟು ಸಾಂಪ್ರಾದಾಯಿಕ ಹಬ್ಬದ ಬಗ್ಗೆ ಧ್ವನಿ ಎತ್ತಿದ್ದರು. ಸಾಕಷ್ಟು ರಾಜಕೀಯ ದೃಷ್ಟಿಕೋನಗಳಿಂದ ವಿಶಾಲ್ ಹೆಸರುವಾಸಿಯಾಗಿದ್ದು, ನಟ-ರಾಜಕಾರಣಿ ಕಮಲ್ ಹಾಸನ್ಗೆ ಹತ್ತಿರವಾಗಿದ್ದಾರೆ ಎನ್ನಲಾಗಿದೆ.
ಇನ್ನು ರಾಷ್ಟ್ರಪ್ರಶಸ್ತಿ ವಿಜೇತೆ ಕಂಗನಾ ಸಹ ತಮಿಳುನಾಡಿನಲ್ಲಿ ಹೆಸರುವಾಸಿಯಾಗಿದ್ದು, ಪ್ರಸ್ತುತ ಮಾಜಿ ಸಿಎಂ ದಿವಂಗತ ಜಯಲಲಿತಾ ಜೀವನಾಧಾರಿತ ಚಿತ್ರದಲ್ಲಿ ನಟಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ.
ಮುಂಬೈನಲ್ಲಿರುವ ಕಂಗನಾ ಕಚೇರಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಮುಂಬೈ ಮಹಾನಗರ ಪಾಲಿಕೆ ಕಚೇರಿಯ ಒಂದು ಭಾಗವನ್ನು ನೆಲಸಮ ಮಾಡಿದ್ದು, ಇದರ ವಿರುದ್ಧ ಕಂಗನಾ ಕಿಡಿಕಾರಿದ್ದಾರೆ. ಅಲ್ಲದೆ, ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ಬಳಿಕ ಕಂಗನಾ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. (ಏಜೆನ್ಸೀಸ್)