ಹಾಸನ: ನಗರ ಸೌಂದರ್ಯ ವರ್ಧನೆಗಾಗಿ ನಾಲ್ಕಾರು ಜನ ಸೇರಿ ಪಾರ್ಥೇನಿಯಂ ಗಿಡ ಕೀಳಲು ಹೋದರೆ ನಮ್ಮ ಮನೆ ಮುಂದೆಯೂ ಬೆಳೆದಿದೆ ನೋಡಿ ಎಂದು ಹೇಳುವ ನಾಗರಿಕರ ನಡುವೆ ನಾವಿದ್ದೇವೆ ಎಂದು ಹಸಿರು ಭೂಮಿ ಪ್ರತಿಷ್ಠಾನ ಅಧ್ಯಕ್ಷ ಪುಟ್ಟಯ್ಯ ಬೇಸರ ವ್ಯಕ್ತಪಡಿಸಿದರು.
ನಗರದ ಸತ್ಯವಂಗಲ ಕೆರೆ ಆವರಣದಲ್ಲಿ ಭಾನುವಾರ ಹಸಿರು ಭೂಮಿ ಪ್ರತಿಷ್ಠಾನದಿಂದ ಏರ್ಪಡಿಸಿದ್ದ 65ನೇ ಕನ್ನಡ ರಾಜ್ಯೋತ್ಸವ ಹಾಗೂ ಹಳದಿ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
’ನಮ್ಮೂರ ಸೇವೆ’ ಸಂಘಟನೆ ಮೂಲಕ ಕೆಲ ವರ್ಷಗಳ ಹಿಂದೆ ಕೈಗೊಂಡಿದ್ದ ಸ್ವಚ್ಛತಾ ಕೆಲಸಗಳ ಸಂದರ್ಭದಲ್ಲಿ ಇಂತಹ ಕಹಿ ಅನುಭವಗಳಾಗಿವೆ. ನಾಗರಿಕರು ಬದಲಾಗುವ ವರೆಗೆ ಸ್ವಚ್ಛ ಹಾಸನ ನಿರ್ಮಿಸಲು ಸಾಧ್ಯವಾಗುವುದಿಲ್ಲ ಎಂದರು.
ಹಸಿರು ಭೂಮಿ ಪ್ರತಿಷ್ಠಾನ ಕೆರೆ, ಕಟ್ಟೆಗಳ ರಕ್ಷಣೆಯಲ್ಲಿ ಸಾಕಷ್ಟು ಕೆಲಸ ಮಾಡಿದೆ. ಹುಣಸಿನಕೆರೆ, ಸತ್ಯವಂಗಲ ಕೆರೆ, ಜವೇನಹಳ್ಳಿ, ದೊಡ್ಡಕೊಂಡಗೊಳ ಕೆರೆಗಳಿಗೆ ಮರು ಜೀವ ನೀಡಿರುವುದು ಮಾತ್ರವಲ್ಲದೆ ಜಿಲ್ಲೆಯ ಕಲ್ಯಾಣಿಗಳಿಗೆ ಪುನಶ್ಚೇತನ ಕಲ್ಪಿಸಲಾಗಿದೆ ಎಂದರು.
ಹಾಸನ ಹಾಲು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಮಾತನಾಡಿ, ಸ್ವಚ್ಛತೆಯ ಕುರಿತು ಜನರಲ್ಲಿ ಅರಿವು ಮೂಡಬೇಕು. ಸಾರ್ವಜನಿಕ ಆಸ್ತಿ ರಕ್ಷಣೆ ನನ್ನ ಕರ್ತವ್ಯ ಎಂಬ ಮನೋಭಾವ ಬರಬೇಕು ಎಂದರು.
ಪ್ರಗತಿಪರ ಚಿಂತಕ ಆರ್.ಪಿ. ವೆಂಕಟೇಶಮೂರ್ತಿ, ಉಪನ್ಯಾಸಕ ಡಾ. ಸೀ.ಚ. ಯತೀಶ್ವರ್ ಮಾತನಾಡಿದರು.