ಚಿಂಚೋಳಿ: ಹಸರಗುಂಡಗಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗಿದ್ದು, ಮದ್ಯವ್ಯಸನ ಮುಕ್ತ ಗ್ರಾಮಕ್ಕೆ ಆಗ್ರಹಿಸಿ ಗ್ರಾಮದ ವಿವಿಧ ಸಂಘಟನೆಗಳು, ಮದ್ಯವ್ಯಸನ ಮುಕ್ತಿ ಹೋರಾಟ ಸಮಿತಿಯಿಂದ ಗ್ರಾಮದಿಂದ ಚಿಂಚೋಳಿ ಅಬಕಾರಿ ಕಚೇರಿವರೆಗೆ ೧೯ ಕಿ.ಮೀ.ಪಾದಯಾತ್ರೆ ನಡೆಸಿ, ಮನವಿ ಸಲ್ಲಿಸಲಾಯಿತು.
ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಮಿತಿ ಮೀರಿದ್ದು, ಬಡ, ಕೂಲಿ ಕಾರ್ಮಿಕರ ಕುಟುಂಬ ಬೀದಿಗೆ ಬೀಳುತ್ತಿವೆ. ಮಹಿಳೆಯರು ರಸ್ತೆಗಳ ಮೇಲೆ ಓಡಾಡದಂತ ಸ್ಥಿತಿ ನಿರ್ಮಾಣವಾಗಿದೆ. ಕಿರಾಣಿ, ಹೊಟೇಲ್, ಪಾನ್ಶಾಪ್ ಸೇರಿ ಮನೆಗಳಲ್ಲೂ ಸರಾಯಿ ದೊರೆಯುತ್ತಿದೆ. ಇದಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಚಿಮ್ಮನಚೋಡದಲ್ಲಿನ ಸರಾಯಿ ಶಾಪ್ನವರು ಅಕ್ರಮ ಮದ್ಯ ಸರಬರಾಜು ಮಾಡುತ್ತಿದ್ದು, ಅದನ್ನು ತಡೆಗಟ್ಟಬೇಕು. ಹಸರಗುಂಡಗಿ ಗ್ರಾಮ ಸರಾಯಿ ಮುಕ್ತ ಮಾಡಬೇಕು. ದೋಟಿಕೋಳ, ದೇಗಲ್ಮಡಿ ಗ್ರಾಮಕ್ಕೆ ಅಕ್ರಮ ಸರಬರಾಜು ಮಾಡಲಾಗುತ್ತಿದೆ. ಹೀಗೆ ತಾಲೂಕಿನಾದ್ಯಂತ ಅಕ್ರಮ ಸರಬರಾಜು ನಡೆಯುತ್ತಿದ್ದು, ಶೀಘ್ರ ತಡೆಯಬೇಕು. ಇಲ್ಲದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿವಿಧ ಬೇಡಿಕೆಗಳ ಮನವಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಅಬಕಾರಿ ಪಿಎಸ್ಐ ಪ್ರಕಾಶ ಜಾಧವ್ಗೆ ಸಲ್ಲಿಸಿದರು. ಗ್ರಾಪಂ ಅಧ್ಯಕ್ಷ ಗೌತಮ, ಮಾರುತಿ ಗಂಜಗೇರಿ, ಕಾಶೀನಾಥ ಸಿಂಧೆ, ಗೋಪಾಲ ಗಾರಂಪಳ್ಳಿ, ಗಿರಿಮಲ್ಲಪ್ಪ, ಸೂರ್ಯಕಾಂತ, ವೀರಶೆಟ್ಟಿ, ಮಾಪಣ್ಣ, ಶಾಂತಕುಮಾರ, ಉಮೇಶ ದೋಟಿಕೋಳ, ನಿರ್ಮಲಾ, ಜಯಶೀಲ, ಗುಂಡಪ್ಪ, ಸುಭಾಷ, ಕೃಷ್ಣಾ, ಸಂಜುಕುಮಾರ ರೆಡ್ಡಿ, ಶರಣಮ್ಮ, ಪ್ರೇಮಿಳಾ, ರೇಣುಕಾ, ನಾಗಮ್ಮ, ಯಾದಮ್ಮ, ಕವಿತಾ, ಅಂಬಿಕಾ ಇತರರಿದ್ದರು.