ಚಂಡೀಗಢ: ಹರಿಯಾಣ ರಾಜಕೀಯದಲ್ಲಿ ಭಾರಿ ಬದಲಾವಣೆ ಗಾಳಿ ಬೀಸಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಹಾಗೂ ಜನನಾಯಕ ಜನತಾ ಪಕ್ಷ (ಜೆಜೆಪಿ) ನಡುವಿನ ಮೈತ್ರಿ ಮುರಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಹರಿಯಾಣ ಬಿಜೆಪಿ ಸರ್ಕಾರ ಪತನಗೊಂಡಿದೆ.
ಸಿಎಂ ಮನೋಹರ್ ಲಾಲ್ ಖಟ್ಟರ್ ಸೇರಿದಂತೆ ಸಂಪುಟದ ಸಚಿವರೆಲ್ಲರು ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸೀಟು ಹಂಚಿಕೆ ವಿಚಾರದಲ್ಲಿ ಉಭಯ ಪಕ್ಷಗಳ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರ ಪತನಗೊಂಡಿದೆ.
Manohar Lal Khattar resigns as CM of Haryana pic.twitter.com/mV311cH8jm
— ANI (@ANI) March 12, 2024
ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರಿಗೆ ಮನೋಹರ್ ಲಾಲ್ ಖಟ್ಟರ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ. 90 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಹರಿಯಾಣದಲ್ಲಿ ಸರ್ಕಾರ ರಚಿಸಲು ಮ್ಯಾಜಿಕ್ ನಂಬರ್ 46ರ ಅವಶ್ಯಕತೆ ಇದೆ. ಸದ್ಯ ಬಿಜೆಪಿ 41 ಶಾಸಕರನ್ನು ಹೊಂದಿದ್ದು, 6 ಪಕ್ಷೇತರರ ಶಾಸಕರ ಬೆಂಬಲದಿಂದ ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿದೆ. ಇಂದೇ ಹರಿಯಾಣಕ್ಕೆ ಹೊಸ ಮುಖ್ಯಮಂತ್ರಿ ಆಯ್ಕೆಯಾಗುವ ಸಾಧ್ಯತೆ ಇದೆ.
ದುಶ್ಯಂತ್ ಚೌಟಾಲಾ ನೇತೃತ್ವದ ಜೆಜೆಪಿ ಜತೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಇಲ್ಲಿಯವರೆಗೂ ಬಿಜೆಪಿ ಹರಿಯಾಣದಲ್ಲಿ ಅಧಿಕಾರದ ಗದ್ದುಗೆಗೆ ಏರಿತ್ತು. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆ ಉಭಯ ಪಕ್ಷದ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಮೈತ್ರಿಯಲ್ಲಿ ಬಿರುಕು ಮೂಡಿದೆ. ಇದರ ಬೆನ್ನಲ್ಲೇ ಮನೋಹರ್ ಲಾಲ್ ಖಟ್ಟರ್ ರಾಜೀನಾಮೆ ನೀಡಿದ್ದು, ಇಂದು ಬಿಜೆಪಿ ಶಾಸಕರು ಸಭೆ ನಡೆಸಿ, ಹೊಸ ಸಿಎಂ ಆಯ್ಕೆ ಮಾಡಲಿದ್ದಾರೆ. ಅರ್ಜುನ್ ಮುಂಡಾ, ಬಿಪ್ಲಬ್ ದೇಬ್ ಮತ್ತು ತರುಣ್ ಚುಗ್ ಸೇರಿದಂತೆ ಬಿಜೆಪಿ ಪಕ್ಷದ ಪರಿವೀಕ್ಷಕರು ಚಂಡೀಗಢಕ್ಕೆ ಆಗಮಿಸಿದ್ದು, ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಿಎಎ ಜಾರಿ ಸ್ವೀಕಾರಾರ್ಹವಲ್ಲ: ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ನಟ ವಿಜಯ್