ಹರಪನಹಳ್ಳಿ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಾಲೂಕಿನ 60 ಕೆರೆಗಳ ನೀರು ತುಂಬಿಸುವ ಯೋಜನೆ ಹಾಗೂ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆ ಮಂಜೂರಾಗಿದ್ದು, ಇವುಗಳನ್ನು ಅನುಷ್ಠಾನಗೊಳಿಸಲು ಇಲ್ಲಿನ ಜನಪತ್ರಿನಿಧಿಗಳು, ಅಧಿಕಾರಿಗಳ ನಿರ್ಲಕ್ಷೃವೇ ಕಾರಣ ಎಂದು ಹೋರಾಟ ಸಮಿತಿ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ್ ಆರೋಪಿಸಿದರು.
ಎಂ.ಪಿ.ರವೀಂದ್ರರ ಮಹತ್ತರ ಯೋಜನೆಗಳಾದ ಬ್ರಿಡ್ಜ್ ಕಂ ಬ್ಯಾರೇಜ್ ಹಾಗೂ 60 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕಾಗಿ ನಿಟ್ಟೂರು ಜಾಕ್ವೆಲ್ ಪಂಪ್ಹೌಸ್ಗೆ ಸೋಮವಾರ ಮುತ್ತಿಗೆ ಹಾಕಿ ಮಾತನಾಡಿದರು.
ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಧಿಕಾರದಲ್ಲಿದ್ದು, ಈ ಕಾಮಗಾರಿ ವಿಳಂಬಕ್ಕೆ ಏನು ಕಾರಣ ಎಂದು ಪ್ರಶ್ನಿಸಿದರು. ಎರಡು ತಿಂಗಳಲ್ಲಿ ಪೂರ್ಣಗೊಳಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಈ ಹೋರಾಟ ರಾಜಕೀಯ ಪ್ರೇರಿತವಲ್ಲ. ನೀರು ಎಲ್ಲರಿಗೂ ಬೇಕು, ಅದು ಎಲ್ಲರ ಹಕ್ಕು. ಈ ಯೋಜನೆಗಳು ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುತ್ತಿದ್ದು, ಇದಕ್ಕೂ ಆಮೆ ನಡೆಗೆ ಸಲ್ಲ ಎಂದರು. ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವಶಿವಯೋಗಿ ಸ್ವಾಮೀಜಿ, ರೈತ ಮುಖಂಡ ಮಹೇಶ್ವರ ಸ್ವಾಮಿ ಮಾತನಾಡಿದರು.
ಅಡವಿಹಳ್ಳಿ ಹಾಲಸ್ವಾಮಿ, ಗುಡಿಹಳ್ಳಿ ಹಾಲೇಶ್, ಕವಿತಾ ವಾಗೀಶ್, ಡಾ.ಮಹಾಂತೇಶ್ ಚರಂತಿಮಠ, ಗಾಯತ್ರಿದೇವಿ, ಗಣೇಶ್, ವಕೀಲ ಸಿದ್ದಲಿಂಗನಗೌಡ, ದಾದಾಪೀರ್ ಇತರರಿದ್ದರು.