ಹರಿಹರ: ಹಣ್ಣಿನ ಅಂಗಡಿ ಮಾಲೀಕರು ಹಾಗೂ ಬೀದಿ ಬದಿ ವ್ಯಾಪಾರಿಗಳ ಒತ್ತಡಕ್ಕೆ ಮಣಿದ ತಾಲೂಕು ಆಡಳಿತ, ಸ್ಥಳೀಯವಾಗಿ ವಿಧಿಸಿದ್ದ ಲಾಕ್ಡೌನ್ ಮೊಟಕುಗೊಳಿಸಿಛಿ. ಮಧ್ಯಾಹ್ನದ ನಂತರ ರಾತ್ರಿ 8 ಗಂಟೆವರೆಗೆ ವ್ಯಾಪಾರ ನಡೆಸಲು ಅವಕಾಶ ನೀಡಿದೆ.
ಮಾಜಿ ಶಾಸಕ ಬಿ.ಪಿ.ಹರೀಶ್ ನೇತೃತ್ವದಲ್ಲಿ ಶನಿವಾರ ಸಿಪಿಐ ಕಚೇರಿಗೆ ತೆರಳಿದ ಹಣ್ಣು, ಫುಟ್ಪಾತ್ ಅಂಗಡಿ ವ್ಯಾಪಾರಿಗಳು, ಜಿಲ್ಲೆಯ ಇತರ ನಗರಗಳಂತೆ ಸಾಮಾನ್ಯ ದಿನಗಳಲ್ಲಿ ತಮಗೂ ವ್ಯಾಪಾರ ನಡೆಸಲು ಅನುಮತಿ ನೀಡುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡಿದರು.
ಮಾಜಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಮಧ್ಯಾಹ್ನಕ್ಕೇ ಅಂಗಡಿ ಬಂದ್ ಮಾಡಿದರೆ ಗ್ರಾಮೀಣ ಜನರಿಗೆ ತೊಂದರೆಯಾಗುತ್ತದೆ. ದುಡಿಮೆ ಇಲ್ಲದೇ ಮಾಸಿಕ ಬಾಡಿಗೆ ಪಾವತಿಗೆ ಪರದಾಡಬೇಕಾಗುತ್ತದೆ. ಫುಟ್ಪಾತ್ ವ್ಯಾಪಾರಿಗಳ ಬದುಕು ದುಸ್ತರವಾಗುತ್ತದೆ. ಆದ್ದರಿಂದ ಸಾಮಾಜಿಕ ಅಂತರ ಕಾಪಾಡಿಕೊಂಡು ರಾತ್ರಿ 8ಗಂಟೆವರೆಗೆ ವಹಿವಾಟು ನಡೆಸಲು ಅವಕಾಶ ಕಲ್ಪಿಸಬೇಕೆಂದು ಸ್ಥಳದಲ್ಲಿದ್ದ ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಅವರಿಗೆ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್, ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಸಿಪಿಐ ಶಿವಪ್ರಸಾದ್, ಪಿಎಸ್ಐ ಶೈಲಶ್ರೀ ಇವರೊಂದಿಗೆ ಚರ್ಚಿಸಿ ಬೀದಿ ಬದಿ, ಹಣ್ಣಿನ ವ್ಯಾಪಾರಿಗಳು ಹಾಗೂ ಎಗ್ ರೈಸ್ ಅಂಗಡಿಗಳಿಗೆ ಮಾತ್ರ ರಾತ್ರಿ 8 ಗಂಟೆವರೆಗೆ ವ್ಯಾಪಾರ ನಡೆಸಲು ಅವಕಾಶ ನೀಡಿರುವುದಾಗಿ ತಿಳಿಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಹೋಟೆಲ್ ಮತ್ತು ಬೇಕರಿ ಮಾಲೀಕರ ಸಂಘದ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ, ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಮ್ಜದ್ ಅಲಿ, ಮಹಮ್ಮದ್ ರಫೀಕ್, ಗ್ರಾಮಲೆಕ್ಕಿಗ ಎಚ್.ಜಿ.ಹೇಮಂತ್ ಇತರರಿದ್ದರು.